ಬೆಂಗಳೂರು: ಕೆಲ ಶಾಸಕರ ವಿರೋಧದಿಂದಾಗಿ ಇದೇ 9 ರಿಂದ ಆರಂಭವಾಗಬೇಕಿದ್ದ 18 ಶಾಸಕರ ಉತ್ತರ ಭಾರತ ಅಧ್ಯಯನ ಪ್ರವಾಸಕ್ಕೆ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಡೆ ನೀಡಿದ್ದಾರೆ.
ರಾಜ್ಯದಲ್ಲಿ ಬರಗಾಲ ಇರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂಗಾರು ಅಧಿವೇಶನದ ಬಳಿಕ ಪುನರ್ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ಮೇ 9 ರಂದು ಉತ್ತರ ಭಾರತದ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ಗಳಿಗೆ 8 ದಿವಸ ಪ್ರವಾಸ ಕೈಗೊಳ್ಳಬೇಕಿತ್ತು.
ಅಧ್ಯಯನದ ಹೆಸರಿನಲ್ಲಿ ಮೋಜಿನ ಪ್ರವಾಸ ಕೈಗೊಳ್ಳುವುದರ ಬಗ್ಗೆ ಅಧೀನ ಶಾಸನ ರಚನಾ ಸಮಿತಿ ಸದಸ್ಯ ಹಾಗೂ ಶಾಸಕ ರವಿ ಸುಬ್ರಹ್ಮಣ್ಯ ಇತ್ತೀಚೆಗೆ ನಡೆದ ಆಂತರಿಕ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರು ಪ್ರವಾಸ ವಿರೋಧಿಸಿ ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಸವನ್ನು ರದ್ಧುಗೊಳಿಸಲಾಗಿದೆ.