ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಕಾರ್ಯಕರ್ತನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಮೈಸೂರಿನ ಸಾ.ರಾ.ಕನ್ವೆನ್ಷನ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್ ಮೈಸೂರು ನಗರ ಹಾಗೂ ಗ್ರಾಮಾಂತರ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಈ ಘಟನೆ ನಡೆದಿದೆ.
ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶಗೌಡ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ ಕಾರ್ಯಕರ್ತರು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಘೋಷಣೆ ಕೂಗುತ್ತಿದ್ದ ಗುಂಪಿನ ಬಳಿ ಬಂದ ಕುಮಾರಸ್ವಾಮಿ ಭಿ ಪಾರಂ ನೀಡಲು ನಾನಿಲ್ಲಿ ಬಂದಿಲ್ಲ ಎಂದು ಹೇಳಿದರು.
ಈ ವೇಳೆ ಗುಂಪಿನಲ್ಲಿ ಕುಮಾರಸ್ವಾಮಿ ಅವರ ಹಿಂದೆ ನಿಂತಿದ್ದ ಜೆಡಿಎಸ್ ಕಾರ್ಯಕರ್ತ ಹಾಗೂ ಹುಣಸೂರು ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರೇಮ್ ಕುಮಾರ್ ಕುಮಾರ ಸ್ವಾಮಿ ಅವರ ಭುಜ ಹಿಡಿದು ಎಳೆದಿದ್ದಾನೆ ಮತ್ತು ಎಚ್ ಡಿಕೆ ಕಾಲಿಗೆ ಬಿದ್ದು ಹರೀಶ್ ಗೌಡ ಗೆ ಟಿಕೆಟ್ ನೀಡಬೇಕೆಂದು ಜೋರಾಗಿ ಘೋಷಣೆ ಕೂಗಿದ್ದಾನೆ.
ಈ ವೇಳೆ ಆಕ್ರೋಶಗೊಂಡ ಎಚ್ ಡಿಕೆ ಪ್ರೇಮ್ ಕುಮಾರ್ ಕೆನ್ನೆಗೆ ಎರಡು ಬಾರಿ ಬಾರಿಸಿ ದೂರ ಹೋಗುವಂತೆ ಆಗ್ರಹಿಸಿದ್ದಾರೆ. ನಂತರ ಕುಮಾರಸ್ವಾಮಿ ಮತ್ತು ಸಾ.ರಾ ಮಹೇಶ್ ಆತನನ್ನು ಕೊಠಡಿಗೆ ಕರೆದೊಯ್ದು ಮಾತನಾಡಿದ್ದಾರೆ.
ನಂತರ ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಟಿಕೆಟ್ ಸಂಬಂಧ ಹುಣಸೂರು ಕ್ಷೇತ್ರದ ಕೆಲ ಕಾರ್ಯಕರ್ತರು ಸಭೆಯ ಬಳಿಕ ತಳ್ಳಾಟ ನಡೆಸಿದರು. ನಾನು ಯಾರಿಗೂ ಕಪಾಳಮೋಕ್ಷ ಮಾಡಿಲ್ಲ. ಕಾಲಿಗೆ ಬೀಳಲು ಬಂದ ಕಾರ್ಯಕರ್ತರನ್ನು ಬದಿಗೆ ಹೋಗುವಂತೆ ಹೇಳಿದೆ. ನಾನು ಯಾವತ್ತೂ ತಾಳ್ಮೆ ಕಳೆದುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಅವರನ್ನು ಜೆಡಿಎಸ್ಗೆ ಕರೆತಂದು ಹುಣಸೂರು ಕ್ಷೇತ್ರದಿಂದ ಟಿಕೆಟ್ ಕೊಡಿಸಲು ಪ್ರಯತ್ನ ನಡೆಯುತ್ತಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಮಹೇಶ್ ಅವರ ಮೇಲೆ ಕೈ ಮಾಡಲು ಕೆಲವರು ಮುಂದಾದರು. ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕೆಂದು ಮಹೇಶ್ ಕೋರಿಕೊಂಡರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos