ಬೆಂಗಳೂರು: ಜನರ ಮನ್ನಣೆಗೆ ಕಾರಣವಾಗಿರುವ ಮತ್ತು ಖಾಸಗಿ ವೈದ್ಯರ ವಿರೋಧಕ್ಕೆ ಕಾರಣವಾಗಿದ್ದ ಕೆಪಿಎಂಇ ತಿದ್ದುಪಡಿ ಕಾಯ್ದೆ ಸಂಬಂಧ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ಪ್ರತಿಪಕ್ಷಗಳು ಯಡವಿತೇ..? ಎಂಬ ಪ್ರಶ್ನೆ ಮೂಡುತ್ತಿದೆ.
ಹೌದು..ಕಳೆದ ನಾಲ್ಕು ದಿನಗಳಿಂದ ನಡೆದಿದ್ದ ವೈದ್ಯರ ಮುಷ್ಕರ ಇಡೀ ರಾಜ್ಯದ ಜನತೆ ತಲ್ಲಣಿಸುವಂತೆ ಮಾಡಿತ್ತು. ಸರ್ಕಾರದ ಕಾಯ್ದೆಗೆ ಖಾಸಗಿ ವೈದ್ಯರು ವಿರೋಧ ವ್ಯಕ್ತಪಡಿಸಿ ಮುಷ್ಕರ ಕುಳಿತಿದ್ದರು. ಖಾಸಗಿ ವೈದ್ಯರ ಮುಷ್ಕರದಿಂದಾಗಿ ರಾಜ್ಯಾದ್ಯಂತ ಹತ್ತಾರು ಮಂದಿ ಸಾವನ್ನಪ್ಪಿದರು. ಆದರೆ ಇದೇ ಮೊದಲ ಬಾರಿ ಎಂಬಂತೆ ಸರ್ಕಾರದ ನಿರ್ಧಾರಕ್ಕೆ ಬೆಂಬಲ ವ್ಯಕ್ತವಾಗಿ ವೈದ್ಯರ ಮುಷ್ಕರಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮಾತ್ರ ಪರಿಸ್ಥಿತಿಯ ಲಾಭ ಪಡೆಯುವಲ್ಲಿ ಸಂಪೂರ್ಣ ಎಡವಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಬಿಜೆಪಿ ಪಕ್ಷದ ನಾಯಕರು ಸಾರ್ವಜನಿಕರ ಮನ್ನಣೆಗೆ ಕಾರಣವಾಗಿರುವ ಕೆಪಿಎಂಇ ಕಾಯ್ದೆ ಬಗ್ಗೆ ಸಂಪೂರ್ಣ ವಿವರ ತಿಳಿಯದೇ ಕೇವಲ ವೈದ್ಯರು ಸರ್ಕಾರದ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾರೆ ಎಂಬ ಒಂದೇ ಕಾರಣದಿಂದಾಗಿ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡುವ ಮೂಲಕ ಇದೀಗ ರಾಜ್ಯದ ಜನರ ಮುಂದೆ ಮುಜುಗರಕ್ಕೀಡಾಗಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ವೈದ್ಯರ ಮುಷ್ಕರದ ಪರಿಸ್ಥಿತಿ ಕುರಿತಂತೆ ಬಿಜೆಪಿ ಸಂಪೂರ್ಣ ವಿಫಲವಾಗಿದ್ದು, ಹೋರಾಟದ ರೂಪುರೇಷೆ ಸಿದ್ಧಪಡಿಸುವಲ್ಲಿ ಬಿಜೆಪಿ ಮುಖಂಡರು ವಿಫಲವಾಗಿದ್ದಾರೆ. ಅಂತೆಯೇ ಜೆಡಿಎಸ್ ಕೂಡ ಈ ಬಗ್ಗೆ ವೈದ್ಯರಿಗೆ ಬಹಿರಂಗ ಬೆಂಬಲ ನೀಡಿದ್ದು, ಮುಷ್ಕರದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಅವರು ವೈದ್ಯರ ಬೇಡಿಕೆ ನ್ಯಾಯುತವಾದದ್ದು ಎಂದು ಹೇಳಿದ್ದರು.
ಇನ್ನು ಸರ್ಕಾರದ ತಿದ್ದುಪಡಿ ಕಾಯ್ದೆ ಬಗ್ಗೆ ಬಿಜೆಪಿ ವಲಯದಲ್ಲೇ ಪರ-ವಿರೋಧ ನಿಲುವುಗಳಿದ್ದವು. ಮತ್ತೊಂದು ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ಘಟಕದ ಪ್ರಮುಖ ನಾಯಕರುಗಳಿಗೇ ಕಾಯ್ದೆ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲವಂತೆ. ಹೀಗಾಗಿ ಪಕ್ಷದಲ್ಲಿನ ಪರ-ವಿರೋಧ ನಿಲುವುಗಳನ್ನೇ ನಿರ್ಲಕ್ಷಿಸಿ ಏಕಾಏಕಿ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡುವ ಮೂಲಕ ಪ್ರತಿಪಕ್ಷ ನಾಯಕರು ರಾಜ್ಯದ ಜನತೆ ಮುಂದೆ ಮುಜುಗರಕ್ಕೀಡಾಗಿದ್ದಾರೆ.
ಬೆಂಬಲ ನೀಡುವ ಬದಲು ವೈದ್ಯರ ಮನವೊಲಿಸಿ ಮುಷ್ಕರ ವಾಪಸ್ ಪಡೆಯಲು ಪ್ರಯತ್ನಿಸಬಹುದಿತ್ತು. ಅದನ್ನು ಬಿಟ್ಟು ಪ್ರತಿಪಕ್ಷ ಮುಖಂಡರು ಪರಿಸ್ಥಿತಿಯನ್ನು ತಮ್ಮ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos