ವಿಧಾನಸಭೆ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಸರ್ಕಾರಿ ವೈದ್ಯೆ ಡಾ.ಸೈಲಜಾ ಅವರು ಸಿಬಿಐ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾದ ವರದಿ ಬಿತ್ತರಿಸಿದ ಖಾಸಗಿ ಸುದ್ದಿ ವಾಹಿನಿಯ ವರದಿಯನ್ನು ಆಧರಿಸಿ ಸದನದಲ್ಲಿ ಹೇಳಿಕೆ ನೀಡಿದ್ದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ವಿರುದ್ಧ ಸಚಿವ ಕೆ.ಜೆ.ಜಾರ್ಜ್ ಅವರು ಬುಧವಾ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಿದರು.
ಸಿಬಿಐ ತನಿಖೆ ವೇಳೆ ವೈದ್ಯೆ ಶೈಲಜಾ ಅವರು ತಮ್ಮ ಮೇಲೆ ಸರ್ಕಾರ ಒತ್ತಡ ಹೇರಿತ್ತು ಎಂಬುದಾಗಿ ಹೇಳಿಕೆ ನೀಡಿದ್ದಾರೆಂದು ಖಾಸಗಿ ಸುದ್ದಿವಾಹಿನಿಯೊಂದು ಈ ಹಿಂದೆ ಸುದ್ದಿ ಪ್ರಸಾರ ಮಾಡಿತ್ತು. ಈ ವರದಿಯನ್ನು ಆಧರಿಸಿ ಜಗದೀಶ್ ಶೆಟ್ಟರ್ ಅವರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಸಿಬಿಐ ತನಿಖೆ ನಡೆಸುತ್ತಿರುವಾಗಲೇ ಈ ರೀತಿ ಅಪರಾಧಿ ಎಂಬ ಅರ್ಥದಲ್ಲಿ ನನ್ನ ವಿರುದ್ಧ ಮಾತನಾಡಿರುವುದರಿಂದ ನನ್ನ ಹಕ್ಕುಚ್ಯುತಿಯಾಗಿದೆ ಎಂದು ಪೂರ್ವಭಾವಿ ಪೀಠಿಕೆ ಹಾಕಲು ಮುಂದಾದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶೆಟ್ಟರ್, ಸಚಿವ ಜಾರ್ಜ್ ಅವರು ಎತ್ತಿದ ವಿಚಾರ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ. ಈ ರೀತಿ ಸಚವರು ಮಾಡುವುದು ವಿಪಕ್ಷಗಳನ್ನು ಹತ್ತಿಕ್ಕುವ ತಂತ್ರ. ಇದಕ್ಕೆ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳು ಕೆಲಸ ಮಾಡುವುದನ್ನೇ ನಿಲ್ಲಿಸಬೇಕಾಗುತ್ತದೆ. ಹೀಗಾಗಿ ಅವಕಾಶ ನೀಡಬಾರದು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸ್ಪೀಕರ್ ಕೋಳಿವಾಡ ಅವರು, ವಿಷಯ ಪ್ರಸ್ತಾವಕ್ಕೆ ಸಚಿವರಿಗೆ ಅವಕಾಶ ನೀಡಿದ್ದೇನೆ. ನಿಮಗೂ ನಿಮ್ಮ ಅನಿಸಿಕೆ ಹೇಳಲು ಸಮಯ ಕೊಡುತ್ತೇನೆ. ಮೊದಲು ಸಚಿವರ ಮಾತು ಕೇಳಿ ಎಂದರು. ಬಳಿಕ ತಮ್ಮ ಮಾತನ್ನು ಮುಂದುವರೆಸಿದ ಜಾರ್ಜ್ ಅವರು ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು. ಬಳಿತ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಲು ಆರಂಭಿಸಿದರು. ಬಳಿಕ ವಿಷಯಗಳ ಚರ್ಚೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಹಕ್ಕುಚ್ಯುತಿ ಮಂಡನೆ ಕುರಿತ ದಿನಾಂಕವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos