ರಾಜಕೀಯ

ಸಿಎಂ ಸಿದ್ದರಾಮಯ್ಯ ಬಗ್ಗೆ ಅಸಮಾಧಾನ, ಅತೃಪ್ತಿ ಯಾವುದೂ ಇಲ್ಲ: ಪರಮೇಶ್ವರ

Lingaraj Badiger
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಯಾವುದೇ ಅಸಮಾಧಾನ ಅಥವಾ ಅತೃಪ್ತಿ ಇಲ್ಲ ಎಂದು ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮತ್ತು ಸಿಎಂ ನಡುವೆ ಭಿನ್ನಮತ ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು ಇಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಅವರು, ನೂತನ ಸಚಿವರುಗಳ ಪ್ರಮಾಣ ವಚನ ಸ್ವೀಕಾರಕ್ಕೆ ಗೈರುಹಾಜರಾಗಿದ್ದನ್ನೇ ದೊಡ್ಡದು ಮಾಡಲಾಗಿದೆ. ಜ್ವರ ಇದುದ್ದರಿಂದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಲಿಲ್ಲ ಅಷ್ಟೆ. ತಮ್ಮ ಹಾಗೂ ಮುಖ್ಯಮಂತ್ರಿ ನಡುವೆ `ಕೋಲ್ಡ್ ವಾರ್‌ ಆಗಲಿ, ಹಾಟ್ ವಾರ್ ಆಗಲಿ’ ಇಲ್ಲ ಎಂದು ಹೇಳಿದ್ದಾರೆ.
ಸಿಎಂ ಮತ್ತು ನನ್ನ ನಡುವೆ ಭಿನ್ನಮತ ಇಲ್ಲ. ಅಭಿಪ್ರಾಯಗಳು ಬೇರೆ ಬೇರೆ ಇರುವುದು ಸಹಜ. ಸಂಪುಟ ವಿಸ್ತರಣೆ ಮಾಡುವಾಗ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇರೆ ಬೇರೆ ಹೆಸರು ಸೂಚಿಸಿದ್ದೆವು. ಆದರೆ ಕೊನೆಗೆ ಒಟ್ಟಿಗೆ ಕುಳಿತು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಕಳೆದ 6 ವರ್ಷಗಳಿಂದ ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದೇವೆ.ಗೃಹ ಸಚಿವನಾಗಿಯೂ ಕೆಲಸ ಮಾಡಿದ್ದೇನೆ , ಆ ಸಂದರ್ಭದಲ್ಲೂ ಭಿನ್ನಾಭಿಪ್ರಾಯ ಇರಲಿಲ್ಲ ಎಂದರು.
SCROLL FOR NEXT