ರಾಜಕೀಯ

ಮಂಗಳೂರು ಚಲೋ: ಬಿಎಸ್ ವೈ, ಶೆಟ್ಟರ್‌, ಈಶ್ವರಪ್ಪ, ಸೇರಿ ಹಲವು ಬಿಜೆಪಿ ನಾಯಕರ ಬಂಧನ

Lingaraj Badiger
ಮಂಗಳೂರು: ನಿಷೇಧಾಜ್ಞೆಯ ಮಧ್ಯೆಯೇ ಮಂಗಳೂರು ಚಲೋ ಬೈಕ್‌ ರ್ಯಾಲಿ ನಡೆಸಲು ಮುಂದಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಸೇರಿದಂತೆ ಹಲವು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಿಜೆಪಿ ಯುವಮೋರ್ಚಾದ ಮಂಗಳೂರು ಚಲೋ ರ್ಯಾಲಿಯನ್ನು ಜ್ಯೋತಿ ಸರ್ಕಲ್‌ನಲ್ಲೇ ತಡೆಯಲಾಯಿತು. ಹೀಗಾಗಿ ಜ್ಯೋತಿ ವೃತ್ತದ ಬಳಿ ಲಾರಿಯೊಂದರಲ್ಲಿ ಸಿದ್ಧಪಡಿಸಿದ್ದ ವೇದಿಕೆಯಿಂದಲೇ ಪಕ್ಷದ ಮುಖಂಡರು ಭಾಷಣ ಮಾಡಿದರು. ಈ ಮಧ್ಯೆ, ಜ್ಯೋತಿ ವೃತ್ತದ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡರು.
ಬಿಜೆಪಿ ನಾಯಕರ ಖಂಡನಾ ಭಾಷಣದೊಂದಿಗೆ ರ್ಯಾಲಿ ಅಂತ್ಯವಾಗಿದ್ದು, ಭಾಷಣದ ಬಳಿಕ, ಯಡಿಯೂರಪ್ಪ, ಜದೀಶ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ ಹಾಗೂ ಆರ್‌ ಅಶೋಕ್‌ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೆ ಪೊಲೀಸರ ಕಣ್ತಪ್ಪಿಸಿ ದಕ್ಷಿಣ‌ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ‌ಹೊರಟಿದ್ದ 60 ಮಂದಿ ಬಿಜೆಪಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು.
ಬಿಜೆಪಿ ನಾಯಕರು ಬೈಕ್ ರ್ಯಾಲಿಯ ಮೂಲಕ ನೆಹರು ಮೈದಾನಕ್ಕೆ ತೆರಳಲು ಪೊಲೀಸರು ಅವಕಾಶ ನೀಡದ ಹಿನ್ನಲೆಯಲ್ಲಿ ಜ್ಯೋತಿ ಸರ್ಕಲ್‌ನಲ್ಲೇ ತೆರದ ವಾಹನದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಷಣ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
SCROLL FOR NEXT