ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೇಳಿದರೆ ಕೂಡಲೇ ರಾಜೀನಾಮೆಯನ್ನು ಸಲ್ಲಿಸಿ ಪದತ್ಯಾಗ ಮಾಡುತ್ತೇನೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಶುಕ್ರವಾರ ಹೇಳಿದ್ದಾರೆ.
ಡಿವೈಎಸ್'ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಬಿಜೆಪಿ ನಾಯಕರು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜಕೀಯ ಉಧ್ದೇಶಕ್ಕಾಗಿ ಬಿಜೆಪಿ ಮುಖಂಡರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ, ಇದಕ್ಕೆ ನಾನೂ ರಾಜಕೀಯವಾಗಿಯೇ ಉತ್ತರ ನೀಡುತ್ತೇನೆಂದು ಹೇಳಿದ್ದಾರೆ.
ಮೊದಲು ಸಿಬಿಐ ವರದಿ ನೀಡಲಿ. ನನ್ನ ತಪ್ಪಿದ್ದು ಮುಖ್ಯಮಂತ್ರಿಗಳು ನನ್ನ ರಾಜೀನಾಮೆ ಕೇಳಿದರೆ ಒಂದು ಕ್ಷಣ ಕೂಡ ನಾನು ಖುರ್ಚಿಯಲ್ಲಿ ಕೂರುವುದಿಲ್ಲಿ. ಮುಖ್ಯಮಂತ್ರಿಗಳು ಕೇಳಿದ ತಕ್ಷಣ ರಾಜೀನಾಮೆ ನೀಡಲು ನಾನು ಸಿದ್ಧವಾಗಿದ್ದೇನೆಂದು ತಿಳಿಸಿದ್ದಾರೆ.
ಎಂ.ಕೆ. ಗಣಪತಿ ಪ್ರಕರಣದಲ್ಲಿ ಸಚಿವರ ಪಾತ್ರ ಏನೂ ಇಲ್ಲ ಎಂದು ಸಿಐಡಿ ಈಗಾಗಲೇ ವರದಿ ನೀಡಿದೆ. ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿದೆಯೇ ಹೊರತು ಸಚಿವರ ಪಾತ್ರದ ಬಗ್ಗೆ ಎಲ್ಲೂ ಹೇಳಿಲ್ಲ. ಬಿಜೆಪಿಯವರು ರಾಜಕೀಯ ಕಾರಣಗಳಿಗೆ ರಾಜೀನಾಮೆ ಕೇಳುತ್ತಿದ್ದಾರೆ. ಬಿಜೆಪಿಯವರಿಗೆ ಕೆ.ಜೆ. ಜಾರ್ಜ್ ರಾಜೀನಾಮೆ ಮುಖ್ಯನಾ? ಎಂ.ಕೆ. ಗಣಪತಿ ಆತ್ಮಹತ್ಯೆ ಬಗ್ಗೆ ಮಾಹಿತಿ ಗೊತ್ತಾಗುವುದು ಮುಖ್ಯನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.