ಮಂಜೇಗೌಡ ಮತ್ತು ಎಚ್.ಡಿ ರೇವಣ್ಣ
ಹೊಳೆನರಸಿಪುರ: ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಹಾಸನ ಜಿಲ್ಲೆಯ ಹೊಳೆನರಸಿಪುರ ಕ್ಷೇತ್ರದಲ್ಲಿ ತಮ್ಮ ಮಗ ರೇವಣ್ಣ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಇದುವರೆಗೂ ಒಂದು ಬಾರಿಯೂ ಚುನಾವಣಾ ಪ್ರಚಾರ ನಡೆಸಿಲ್ಲ. ರೇವಣ್ಣ ಈ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಆದರೆ ಈ ಬಾರಿಯ ಚುನಾವಣಾ ಲೆಕ್ಕಾಚಾರ ಬದಲಾಗಿದೆ. ದೇವೇಗೌಡ ಕುಟುಂಬದ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಅವರನ್ನು ಕದನ ಕಣಕ್ಕೆ ತರುತ್ತಿದ್ದಾರೆ.
ಬಾಗೂರು ಮಂಜೇಗೌಡ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ. ಹೀಗಾಗಿ ಜೆಡಿಎಸ್ ಸರ್ವೋಚ್ಚ ನಾಯಕ ದೇವೇಗೌಡ ಈ ಬಾರಿ ರೇವಣ್ಣ ಪರ ಪ್ರಚಾರ ನಡೆಸುವ ಅನಿವಾರ್ಯತೆ ಎದುರಾಗಿದೆ. ಸಾರಿಗೆ ಇಲಾಖೆ ಹಿರಿಯ ಮೋಟಾರು ವಾಹನ ನಿರೀಕ್ಷಕರಾಗಿದ್ದ ಮಂಜೇಗೌಡ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ.
ಕಳೆದ 20 ವರ್ಷಗಳಿಂದ ಹೊಳೆನರಸಿಪುರ ಜನತೆ ರೇವಣ್ಣ ಅವರ ಸರ್ವಾಧಿಕಾರಿ ವರ್ತನೆಯಿಂದ ಬೇಸತ್ತಿದ್ದಾರೆ, ಅವರಿಗೆ ಬಿಡುಗಡೆ ಬೇಕಾಗಿದೆ,ಸಿಎಂ ಸಿದ್ದರಾಮಯ್ಯ ರಾಜಕೀಯಕ್ಕೆ ಬರಲು ನನಗೆ ಪ್ರೋತ್ಸಾಹ ನೀಡುತ್ತದ್ದಾರೆ ಎಂದು ಮಂಜೇಗೌಡ ಹೇಳಿದ್ದಾರೆ.
1952ರಲ್ಲಿ ನಡೆದ ಚುನಾವಣೆಯಿಂದ ದೇವೇಗೌಡ ಆರು ಬಾರಿ ಹಾಗೂ ಅವರ ಪುತ್ರ ರೇವಣ್ಣ 4 ಬಾರಿ ಈ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.
ಈ ಕ್ಷೇತ್ರವನ್ನು ಸಿಎಂ ಸಿದ್ದರಾಮಯ್ಯ ಇಷ್ಟೊಂದು ಗಂಭೀರವಾಗಿ ಪರಿಗಣಿಸಿರುವುದು ಜೆಡಿಎಸ್ ನಾಯಕರಲ್ಲಿ ಆಶ್ಟರ್ಯ ಮೂಡಿಸಿದೆ, ಮಂಜೇಗೌಡ ತಮ್ಮ ಉದ್ಯೋಗ ತೊರೆದು ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ,
ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ನನಗೆ ಯಾವ ಕುತೂಹಲವೂ ಇಲ್ಲ, ಆದರೆ ಸಿಎಂ ಸಿದ್ದರಾಮಯ್ಯ ದೋಷಪೂರಿತ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ, ಇದು ಪ್ರಜಾಪ್ರಭುತ್ವ, ಯಾರೂ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು, ಆದರೆ ಸಿಎಂ ನನ್ನನ್ನು ಟಾರ್ಗೆಟ್ ಮಾಡಲು ವಿಶೇಷ ಆಸಕ್ತಿ ತೋರಿರುವುದು ನಾಚಿಕೆಗೇಡಿನ ಸಂಗತಿ, ಆದರೆ ಈ ಬಾರಿ ನಾನು ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ರೇವಣ್ಣ ಹೇಳಿದ್ದಾರೆ.
ಚನ್ನರಾಯಪಟ್ಟಣದ ಬಾಗೂರು ಗ್ರಾಮದ ಮಂಜೇಗೌಡ ದಾಸ ಒಕ್ಕಲಿಗ ಸಮುದಾಯದವರು, ಹೊಳೆನರಸಿಪುರ ಕ್ಷೇತ್ರ ಒಕ್ಕಲಿಗ ಪ್ರಾಬಲ್ಯದಿಂದ ಕೂಡಿದೆ. 69 ಸಾವಿರ ಒಕ್ಕಲಿಗ, 40 ಸಾವಿರ ಪರಿಶಿಷ್ಟ ಜಾತಿ, ಒಬಿಸಿ 45 ಸಾವಿರ, ಕುರುಬ 15 ಸಾವಿರ, ಲಿಂಗಾಯತ 20 ಸಾವಿರ ಹಾಗೂ 15 ಸಾವಿರ ಇತರರಿದ್ದಾರೆ. ಜಾತಿ ಸಮೀಕರಣ ಈ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡುತ್ತದೆ ಎಂಬುದು ಕಾಂಗ್ರೆಸ್ ನಂಬಿಕೆಯಾಗಿದೆ.
ಆದರೆ ಹಿರಿಯ ಕಾಂಗ್ರೆಸ್ ಮುಖಂಡ ದಿವಂಗತ ಪುಟ್ಟಸ್ವಾಮಿ ಗೌಡರ ಸೊಸೆ ಅನುಪಮಾ ಅವರನ್ನು ಕಡೆಗಣಿಸಿರುವುದು ಕಾಂಗ್ರೆಸ್ ನಲ್ಲಿ ಭಿನ್ಮಮತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅನುಪಮಾ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ದಿಸಬಹುದು, ಇಲ್ಲವೇ ಬಿಜಪಿ ಸೇರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಈ ಅಸಮಾಧಾನದ ಬಗ್ಗೆ ಸಿಎಂ ಸಿದ್ದರಾಮಯ್ಯ ಅನುಪಮಾ ಅವರ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ, ಬಿಜೆಪಿ ಸೇರುವ ಯಾವುದೇ ಯೋಚನೆಯಿಲ್ಲ ಎಂದು ಪ್ರತಿ ಕ್ರಿಯಿಸಿರುವ ಅವರು ಟಿಕೆಟ್ ಹಂಚಿಕೆ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಸಮರ್ಥ ನಾಯಕರಿಗೆ ಯಾವುದೇ ಮೌಲ್ಯವಿಲ್ಲ ಎಂದು ಹೇಳಿದ್ದಾರೆ.
ಬಾಗೂರು ಮಂಜೇಗೌಡ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮುನ್ನ ಕಾಂಗ್ರೆಸ್ ನಾಯಕರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು, ಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷರು ನನ್ನ ಜೊತೆ ಚರ್ಚಿಸಬೇಕಿತ್ತು ಎಂದಿರುವ ಅವರು ಹಲವು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರಲು ಸಿದ್ದರಾಗಿದ್ದಾರೆ ಎಂದು ಹೇಳಿದ್ದಾರೆ, ಜೆಡಿಎಸ್ ಅಭ್ಯರ್ಥಿಗೆ ಬುದ್ದಿ ಕಲಿಸಲು ಹೊಸ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದ್ದರು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos