ಕೆಜೆ ಜಾರ್ಜ್, ಎನ್ ಎ ಹ್ಯಾರೀಸ್
ಬೆಂಗಳೂರು: ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣದಿಂದ ಶಾಂತಿನಗರ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರೀಸ್ ಅವರ ಗೌರವಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂಬುದು ಬೆಂಗಳೂರು ಮೂಲದ ಸಿಟಿಜನ್ ಗ್ರೂಪ್ ರೇಟಿಂಗ್ ನಿಂದ ಸಾಬೀತಾಗಿದೆ.
ಬೆಂಗಳೂರು ಮೂಲದ ಸಿಟಿಜನ್ ಗ್ರೂಪ್, ಬೆಂಗಳೂರು ರಾಜಕೀಯ ಕ್ರೀಯಾ ಸಮಿತಿ(ಬಿ–ಪ್ಯಾಕ್) ಸಿಲಿಕಾನ್ ಸಿಟಿ ಶಾಸಕರಿಗೆ ರೇಟಿಂಗ್ ನೀಡಿದ್ದು, ಉದ್ಯಾನನಗರಿಯ ಐವರು ಸಚಿವರ ಪೈಕಿ ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರು 87 ಅಂಕ ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. 51 ಅಂಕ ಪಡೆದಿರುವ ವಸತಿ ಸಚಿವ ಎಂ ಕೃಷ್ಣಪ್ಪ ಅವರು ಕೊನೆ ಸ್ಥಾನದಲ್ಲಿದ್ದಾರೆ.
ಇನ್ನು ಶಾಸಕರ ಪೈಕಿ, 84 ಅಂಕ ಪಡೆದಿರುವ ಹ್ಯಾರೀಸ್ ಅವರು ಮೊದಲ ಸ್ಥಾನದಲ್ಲಿದ್ದು, 78 ಅಂಕ ಪಡೆದಿರುವ ಹೆಬ್ಬಾಳ ಶಾಸಕ ವೈ ಎ ನಾರಾಯಣಸ್ವಾಮಿ ಮತ್ತು ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ ಗೋಪಾಲಯ್ಯ ಅವರು ನಂತರದ ಸ್ಥಾನದಲ್ಲಿದ್ದಾರೆ. ಕೇವಲ 32 ಅಂಕ ಪಡೆದ ಸಿವಿ ರಾಮನಗರ ಶಾಸಕ ಎಸ್ ರಘು ಅವರು ಕೊನೆ ಸ್ಥಾನದಲ್ಲಿದ್ದಾರೆ.
8 ಮಾನದಂಡಗಳ ಆಧಾರದ ಮೇಲೆ ರಾಜಧಾನಿಯ ಒಟ್ಟು 27 ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ರೇಟಿಂಗ್ ನೀಡಲಾಗಿದೆ ಎಂದು ಬಿ-ಪ್ಯಾಕ್ ಅಧ್ಯಕ್ಷ ಟಿವಿ ಮೋಹನ್ ದಾಸ್ ಪೈ ಅವರು ಹೇಳಿದ್ದಾರೆ.
ಆಡಳಿತಾತ್ಮಕವಾಗಿ ಈ ರೇಟಿಂಗ್ ನೀಡಲಾಗಿದೆ. ಇಲ್ಲಿ ಯಾರು ಒಳ್ಳೆಯವರು ಮತ್ತು ಕೆಟ್ಟವರು ಎಂಬುದು ಮಾನದಂಡವಾಗುವುದಿಲ್ಲ. ಶಾಸಕರಾಗಿ ಅವರು ಮಾಡಬೇಕಾದ ಕರ್ತವ್ಯಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಪೈ ತಿಳಿಸಿದ್ದಾರೆ.
ಶಾಸಕ ಆರ್ ಅಶೋಕ್ ಮತ್ತು ಬಿಎ ಬಸವರಾಜ್ ಅವರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. ಆದರೆ ಹ್ಯಾರೀಸ್ ಅವರ ವಿರುದ್ಧ ಯಾವುದೇ ಗಂಭೀರ ಪ್ರಕರಣ ಇಲ್ಲ. ಆದರೆ ಮತ ಹಾಕುವಾಗ ಪತ್ರನ ಬಂಧನ ವಿಳಂಬ ವಿಚಾರದಲ್ಲಿ ಪೊಲೀಸರ ಮೇಲೆ ಪ್ರಭಾವ ಬೀರಿದ್ದನ್ನು ಜನ ಮರೆಯಲಿಕ್ಕಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos