ರಾಜಕೀಯ

ಕೈ ಟಿಕೆಟ್ ಕಸರತ್ತು: 16 ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ, ಬಿಬಿಎಂಪಿ ಮಾಜಿ ಮೇಯರ್ ಗಳು ಕಣಕ್ಕೆ

Srinivasamurthy VN
ಬೆಂಗಳೂರು: ಭಾನುವಾರ ರಾತ್ರಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ 16 ಹಾಲಿ ಶಾಸಕರು ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 16 ಹಾಲಿ ಶಾಸಕರಿಗೆ ಟಿಕೆಟ್​ ನೀಡಲಾಗಿಲ್ಲ. ಬ್ಯಾಡಗಿ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಶಿವಣ್ಣ, ತರೀಕೆರೆ ಕ್ಷೇತ್ರದ ಶ್ರೀನಿವಾಸ್​, ಬಿಜಾಪುರ ಕ್ಷೇತ್ರದ ಮಕಬುಲ್​ ಭಗವಾನ್​, ನಾಗಠಾಣ ಕ್ಷೇತ್ರದ ರಾಜು ಅಲಗೂರು, ಬಾದಾಮಿ ಕ್ಷೇತ್ರ ಚಿಮ್ಮನಕಟ್ಟಿ, ಕೊಳ್ಳೆಗಾಲ ಕ್ಷೇತ್ರದ ಜಯಣ್ಣ, ಕಲಬುರಗಿ ಕ್ಷೇತ್ರದ ರಾಮಕೃಷ್ಣ ಅವರಿಗೆ ಟಿಕೆಟ್​ ನೀಡಲಾಗಿಲ್ಲ ಎಂದು ತಿಳಿದುಬಂದಿದೆ.
ಅಂತೆಯೇ ಟಿಕೆಟ್ ಪಡೆಯುವ ಪ್ರಬಲ ಆಕಾಂಕ್ಷಿಯಾಗಿದ್ದ, ಮಹದೇವಪ್ಪ ಅವರ ಪುತ್ರನಿಗೂ ಟಿಕೆಟ್​ ನೀಡಿಲ್ಲ. ಜೆಡಿಎಸ್​ನಿಂದ ವಲಸೆ ಬಂದಿರುವವರೆಲ್ಲರಿಗೂ ಟಿಕೆಟ್​ ನೀಡಲಾಗಿದೆ. 
ಲೈಂಗಿಕ ಹಗರಣದಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಚಿವ ಮೇಟಿ, ಕಾಗೋಡು ತಿಮ್ಮಪ್ಪ ಮತ್ತು ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್​ ನೀಡಲಾಗಿದೆ. ವಯಸ್ಸಿನ ಆಧಾರದ ಮೇರೆಗೆ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂದು ಹೇಳಲಾಗಿತ್ತಾದರೂ, ಕೊನೆಯ ಕ್ಷಣದ ಕಸರತ್ತಿನಿಂದಾಗಿ ಶ್ಯಾಮನೂರು ಶಿವಶಂಕರಪ್ಪ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತೆಯೇ ಮುನಿಯಪ್ಪ ಅವರ ಪುತ್ರಿ, ಜಯಚಂದ್ರ ಅವರ ಪುತ್ರ ಸಂತೋಷ್​ ಜಯಚಂದ್ರ, ಸಿದ್ದರಾಮಯ್ಯ ಪುತ್ರ ಯತೀಂದ್ರ, ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಟಿಕೆಟ್​ ನೀಡಲಾಗಿದೆ. ಇನ್ನು ಕಳೆದ ಬಾರಿ ಎಸ್​.ಆರ್​. ಪಾಟೀಲ್​ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಬ್ಯಾಡಗಿ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ಶಿವಣ್ಣ ಅವರಿಗೆ ಟಿಕೆಟ್​ ನೀಡಿಲ್ಲ ಎನ್ನಲಾಗಿದೆ.
ಬಿಬಿಎಂಪಿ ಮೇಯರ್ ಗಳಿಗೆ ಟಿಕೆಟ್
ಇನ್ನು ಇಂದು ಬಿಡುಗಡೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಬಿಬಿಎಂಪಿ ಮಾಜಿ ಮೇಯರ್ ಗಳಿಗೆ ಟಿಕೆಟ್ ನೀಡಲಾಗಿದೆ. ಬಿಬಿಎಂಪಿ ಮಾಜಿ ಮೇಯರ್ ಜಿ ಪದ್ಮಾವತಿ ಮತ್ತು ಸಂಪತ್ ರಾಜ್ ಅವರು ಟಿಕೆಟ್ ಪಡೆದಿದ್ದಾರೆ. ಸಿವಿ ರಾಮನ್ ನಗರದಿಂದ ಸಂಪತ್ ರಾಜ್ ಹಾಗೂ ರಾಜಾಜಿನಗರದಿಂದ ಜಿ ಪದ್ಮಾವತಿ ಕಣಕ್ಕಿಳಿಯಲಿದ್ದಾರೆ.
SCROLL FOR NEXT