ಮೈಸೂರು: ಜೈನನಲ್ಲ ಎಂಬುದನ್ನು ದಾಖಲೆಗಳೊಂದಿಗೆ ಸಾಬೀತು ಮಾಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ಅವರು, ಅಮಿತ್ ಶಾ ಅವರು ತಾವು ಜೈನನಲ್ಲ, ಹಿಂದೂ ವೈಷ್ಣವ ಎಂದು ಹೇಳಿದ್ದಾರೆ. ಜೈನನಲ್ಲ ಎಂದು ಹೇಳುತ್ತಿರುವ ಶಾ ಅವರು ದಾಖಲೆಗಳ ಸಮೇತ ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನನ್ನನ್ನು ಅಹಿಂದು ಎಂದು ಕರೆದಿರುವ ಅಮಿತ್ ಶಾ ಅವರಿಗಿಂತ ನಾನು ಉತ್ತಮ ಹಿಂದು, ಮನುಷ್ಯತ್ವ ಇರುವ, ಮಾನವೀಯ ಮೊಲ್ಯಗಳಲ್ಲಿ ನಂಬಿಕೆ ಇರುವ ಹಿಂದು. ಹೆಣದ ಮೇಲೆ ರಾಜಕೀಯ ಮಾಡುವವರು ನನಗೆ ಹೇಳಲು ಬರುತ್ತಾರೆ. ಅಧಿಕಾರ ಇದ್ದಾಗ ದಲಿತರ ಮನೆಗೆ ಹೋಗದವರು, ಮಂಗಳೂರು ಗಲಭೆಯಲ್ಲಿ ಮೃತಪಟ್ಟ ಇಬ್ಬರ ಪೈಕಿ ಒಬ್ಬರ ಮನೆಗೆ ಹೋಗವವವರು, ಸಂವಿಧಾನ ಬದಲು ಮಾಡುತ್ತೇವೆನ್ನುವವರು ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರದ ವಿರುದ್ಧ ಪ್ರಭುತ್ವ ವಿರೋಧಿ ಅಲೆ ಇಲ್ಲ. ಹೀಗಾಗಿ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು, ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅಪಘಾತ ಕುರಿತು ಅನಂತ್ ಕುಮಾರ್ ಹೆಗಡೆ ಮಾಡಿದ್ದ ಅರೋಪಕ್ಕೆ ತೀವ್ರವಾಗಿ ಕಿಡಿಕಾರಿರುವ ಅವರು, ಪ್ರತಿಯೊಂದು ಘಟನೆಗೂ ಸರ್ಕಾರವನ್ನು ದೂಷಿಸುವುದು ಹಾಸ್ಯಸ್ಪದವಾಗಿದೆ ಎಂದಿದ್ದಾರೆ. ಒಬ್ಬ ಸಚಿವರಾಗಿ ಅಧಾರ ರಹಿತ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ.