ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಚಾಮರಾಜನಗರ: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ವಿವಾದದ ಸುಳಿಗೆ ಸಿಲುಕಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಗೀದ ವಿವಾದದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಧರ್ಮದ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ವಿವಾದವಾದರೆ ಕಷ್ಟ ಎಂದು ಹೇಳಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ಮಾಡಿ ಎಂದು ಗಂಟುಬಿದ್ದವರೇ ವಿರಕ್ತ ಮತ್ತು ಗುರುಪರಂಪರೆಯವರು. ಲಿಂಗಾಯತ ಮತ್ತು ಬಸವಾದಿ ಶರಣರು ಲಿಂಗಾಯತ ಧರ್ಮೀಯರು ಎಂದು ವಾದಿಸಿದವರು, ವಿರಕ್ತ ಪರಂಪರೆಯವರು ವೀರಶೈವ ಧರ್ಮವಾಗಬೇಕು ಎಂದರು. ಗೊಂದಲ ಸೃಷ್ಟಿಯಾಗಿ ಅಲ್ಪಸಂಖ್ಯಾತ ಸಮಿತಿಗೆ ವರದಿ ನೀಡಲು ಸೂಚಿಸಿದೆ. ಆದರೆ, ನನ್ನ ವಿರುದ್ಧ ಅಪಪ್ರಚಾರ ಆಯಿತು. ಅಂದಿನಿಂದ ನಾನು ಹುಷಾರಾಗಿ ಮಾತನಾಡುತ್ತಿದ್ದೇನೆಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್ ಅವರು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಕೈಹಾಕಿದ್ದು ತಪ್ಪಾಯಿತು ಹೇಳಿದ್ದರು. ಇದೀಗ ಸ್ವತಃ ಸಿದ್ದರಾಮಯ್ಯ ಧರ್ಮದ ಬಗ್ಗೆ ಮಾತನಾಡುವುದಿಲ್ಲ ಎಂದು ವಿವಾದದಿಂದ ದೂರವಾಗುವ ಪ್ರಯತ್ನ ನಡೆಸಿದ್ದಾರೆ.