ಬೆಂಗಳೂರು: ಕಾಂಗ್ರೆಸ್ ಎಂಎಲ್ ಸಿ ಪ್ರತಾಪ್ ಚಂದ್ರ ಶೆಟ್ಟಿ ವಿಧಾನ ಪರಿಷತ್ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಆದರೆ ಕಾಂಗ್ರೆಸ್ ನಿಂದ ಎಸ್ ಆರ್ ಪಾಟೀಲ್ ಮತ್ತು ಜೆಡಿಎಸ್ ನಿಂದ ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು.
ಅಧಿಕಾರ ಹಂಚಿಕೆ ಒಪ್ಪಂದದ ಪ್ರಕಾರ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸಭಾಪತಿಯನ್ನಾಗಿ ಆಯ್ಕೆಮಾಡುವಲ್ಲಿ ಯಶಸ್ವಿಯಾಗಿದೆ, ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಚರ್ಚಿಸಿ, ಮನವೊಲಿಸಿ, ತಮ್ಮ ಪಕ್ಷದ ಅಬ್ಯರ್ಥಿಗೆ ಸಭಾಪತಿ ಸ್ಥಾನ ಕೊಡಿಸುವಲ್ಲಿ .ಯಶಸ್ವಿಯಾಗಿದ್ದಾರೆ.
ಸಿದ್ದರಾಮಯ್ಯ ಬಯಸಿದಂತೆ ಮೇಲ್ಮನೆ ಸಭಾಪತಿಯಾಗಿ ಮಾಜಿ ಸಚಿವ ಎಸ್.ಆರ್.ಪಾಟೀಲ್ ಆಯ್ಕೆಯಾಗಬೇಕಿತ್ತು. ವಿದೇಶಕ್ಕೆ ಹೊರಡುವ ಮುನ್ನವೇ ಈ ಸಂಬಂಧ ಹೈಕಮಾಂಡ್ನೊಂದಿಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆದುಕೊಂಡಿದ್ದರು.
ಆದರೆ, ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಸಭಾಪತಿ ಚುನಾವಣೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಪ್ರತಾಪ್ ಚಂದ್ರ ಆಯ್ಕೆಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಈ ಅವಕಾಶ ಬಳಸಿಕೊಂಡ ಡಿಸಿಎಂ ಜಿ. ಪರಮೇಶ್ವರ್, ಸಚಿವ ಡಿಕೆಶಿ ಮತ್ತಿತರರು ಹೈಕಮಾಂಡ್ ಸಂಪರ್ಕಿಸಿ ಶೆಟ್ಟಿ ಆಯ್ಕೆಗೆ ಅನುಮತಿ ಪಡೆದುಕೊಂಡಿದ್ದರು. ಅದರಂತೆ, ಪ್ರತಾಪಚಂದ್ರ ಶೆಟ್ಟಿ ಸಭಾಪತಿಯಾಗಿಯೂ ಆಯ್ಕೆಯಾಗಿದ್ದಾರೆ.
ಬದಲಾಗುತ್ತಿರುವ ರಾಜಕೀಯ ಅಖಾಡದಲ್ಲಿ ತಮಗೆ ಹಿನ್ನಡೆಯಾಗುತ್ತಿರುವುದು ಸಭಾಪತಿ ಆಯ್ಕೆ ವಿಷಯದಲ್ಲೇ ಸಿದ್ದು ಅರಿವಿಗೆ ಬಂದಿದೆ. ಈ ಅಂಶವೂ ಅವರನ್ನು ವಿದೇಶದಿಂದ ವಾಪಸ್ ಬರುವಂತೆ ಮಾಡಿತು ಎಂದು ಹೇಳಲಾಗುತ್ತಿದೆ.
ಇನ್ನೂ ಉತ್ತರ ಕರ್ನಾಟಕ ಭಾಗದವರಿಗೆ ಮತ್ತೆ ಅನ್ಯಾಯವಾಗಿದೆ ಎಂದು ಜೆಡಿಎಸ್ ನ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಾವು ಯಾರು ಸಂನ್ಯಾಸಿಗಳಲ್ಲ,ನಾವು ಕೂಡ ಆಕಾಂಕ್ಷಿಗಳು ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos