ಶಿವಮೊಗ್ಗ: ಸಚಿವ ಸ್ಥಾನ ಸಿಕ್ಕದೆ ಅತೃಪ್ತಿಯಂದಿರುವ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಬಹುದು ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಶಿವಮೊಗ್ಗ ನಗರ ಶಾಸಕರಾಗಿರುವ ಕೆ. ಎಸ್. ಈಶ್ವರಪ್ಪ ಆಹ್ವಾನ ನಿಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಈಶ್ವರಪ್ಪ "ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಗೊಂದಲದಲ್ಲಿ ಮುಕ್ತಾಯ ಕಂಡಿದೆ. ಈ ಸಮಯದಲ್ಲಿ ಕಾಂಗ್ರೆಸ್ ಒಂದು ಹಾಸ್ಯದೃಶ್ಯದ ಭಾಗವಾಗಿದೆ." ಎಂದು ವ್ಯಂಗ್ಯವಾಡಿದ್ದಾರೆ.
"ಬಹುಮತವನ್ನು ಸಾಬೀತುಪಡಿಸುವ ಸಮಯದಲ್ಲಿ ಬಿಎಸ್ವೈನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸುವುದಾಗಿ ಕೆಲವು ಕಾಂಗ್ರೆಸ್ ಶಾಸಕರು ಭರವಸೆ ನೀಡಿದ್ದರು. ಆದರೆ ಅವರು ’ಅಕ್ಷರಶಃ ಲಾಕ್’ ಆಗಿದ್ದರು. ಅಲ್ಲದೆ ವಿಶ್ವಾಸಮತ ಯಾಚನೆಯನ್ನು ಒಂದೇ ದಿನದಲ್ಲಿ ಗಳಿಸಲು ಸಾಧ್ಯವಾಗುಗಲಿಲ್ಲ" ಈಶ್ವರಪ್ಪ ಹೇಳಿದ್ದಾರೆ.
ಬಹುತೇಕ ಕಾಂಗ್ರೆಸ್ ಶಾಸಕರು ತಮಗೆ ’ಮಂತ್ರಿಗಿರಿ’ ತಪ್ಪಿದ ಕಾರಣದಿಂದ ಅಸಮಾಧಾನಗೊಂಡಿದ್ದಾರೆ ಎಂದ ಈಶ್ವರಪ್ಪ " ಅಸಮಾಧಾನ ಹೊಂದಿದ ಕಾಂಗ್ರೆಸ್ ಶಾಅಸಕರು ನಿರಾಶರಾಗುವ ಅಗತ್ಯವಿಲ್ಲ. ಅವರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ನೆರವಾಗಬೇಕು. ಆ ಮೂಲಕ ಪ್ರಧಾನಿ ಮೋದಿ ಅವರ ರಾಜ್ಯ, ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸಬೇಕು" ಎಂದರು.