ರಾಜಕೀಯ

ಬಂಡಾಯ ಶಾಸಕರ ವಿರುದ್ಧ ಒಗ್ಗೂಡಿದ ಕಾಂಗ್ರೆಸ್ ನಿಷ್ಠಾವಂತ ಶಾಸಕರು: ಇಂದು ಸಭೆ

Sumana Upadhyaya

ಬೆಂಗಳೂರು: ಭಿನ್ನಮತೀಯರನ್ನು ಶಮನಗೊಳಿಸಲು ಕಾಂಗ್ರೆಸ್ ನಾಯಕರು ಜಾಗ್ರತೆಯಾಗಿ ಪರಿಸ್ಥಿತಿಯನ್ನು ನಿಭಾಯಿಸಲು ನೋಡುತ್ತಿರುವ ಸಂದರ್ಭದಲ್ಲಿ ಶಾಸಕ ಬಿ ಎ ಬಸವರಾಜ ನೇತೃತ್ವದಲ್ಲಿ ಪಕ್ಷದ ಶಾಸಕರ ಗುಂಪು ಸಭೆ ಸೇರಿ ಭಿನ್ನಮತೀಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾ ನಿಷ್ಠಾವಂತ ಬಸವರಾಜ ಭಿನ್ನಮತೀಯರ ವಿರುದ್ಧ ಹೋರಾಡುವ ಮುಂದಾಳತ್ವ ವಹಿಸಿದ್ದು ಇಂದು ಕಾಂಗ್ರೆಸ್ ನ ನಿಷ್ಠಾವಂತ ಯುವಕರ ಸಭೆ ಕರೆದಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆಯ ನಂತರದ ಬೆಳವಣಿಗೆಗಳ ಬಗ್ಗೆ ಇವರು ಚರ್ಚೆ ನಡೆಸಲಿದ್ದಾರೆ.

ಈ ಮಧ್ಯೆ ಮಾಜಿ ಸಚಿವ ಎಂ ಬಿ ಪಾಟೀಲ್ ಭಿನ್ನಮತೀಯರ ಸಭೆಯನ್ನು ಸದ್ಯದಲ್ಲಿಯೇ ಕರೆದು ಮುಂದಿನ ಕ್ರಮಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಪಾಟೀಲ್ ಅವರಿಗೆ ಸ್ಥಾನ ನೀಡಿ ಇನ್ನೊಂದು ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡುವ ಸಾಧ್ಯತೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬಸವರಾಜ, ಸುಮಾರು 40ರಿಂದ 42 ಕಾಂಗ್ರೆಸ್ ಶಾಸಕರು ಎರಡರಿಂದ ಮೂರು ಬಾರಿ ಶಾಸಕರಾದವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇಲ್ಲಿ ಪಕ್ಷದಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಲಾಗುವುದು. ಪಕ್ಷದ ವರ್ಚಸ್ಸಿಗೆ ಧಕ್ಕೆಯನ್ನುಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ನಾವು ಬಲವಾದ ಸಂದೇಶ ನೀಡಲಿದ್ದೇವೆ. ಇದರಿಂದ ಸಮ್ಮಿಶ್ರ ಸರ್ಕಾರದ ಮೈತ್ರಿಗೆ ಕೂಡ ಧಕ್ಕೆಯಾಗುತ್ತದೆ. ಕೆಲವು ಅಧಿಕಾರ ದಾಹ ಶಾಸಕರಿಂದ ಪಕ್ಷಕ್ಕೆ ಹಾನಿಯಾಗಬಾರದು ಎಂದು ಹೇಳಿದರು.

SCROLL FOR NEXT