ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಬಂಡಾಯ ನಾಯಕರ ಪಟ್ಟಿ ದಿನೇ ದಿನೇ ಬೆಳೆಯುತ್ತಿದ್ದು, ಈ ಪಟ್ಟಿಗೆ ಇದೀಗ ಮಾಜಿ ಸಚಿವ ತನ್ವೀರ್ ಸೇಠ್ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನದ ಲಾಬಿ ಮುಂದುವರೆದಿರುವಂತೆಯೇ ಇಂದು ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರನ್ನು ಭೇಟಿ ಮಾಡಿದ ತನ್ವೀರ್ ಸೇಠ್ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ 'ರಾಜ್ಯದಲ್ಲಿ ಮುಸ್ಲಿಂ ಸಮುದಾಯ ನಾಯಕತ್ವ ಮುಗಿಸುವ ಕೆಲಸ ನಡೆಯುತ್ತಿದ್ದು, ನಮ್ಮ ಸಮುದಾಯದ ಅರ್ಹರಲ್ಲದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಯು.ಟಿ. ಖಾದರ್ ಮತ್ತು ಜಮೀರ್ ಅಹಮದ್ಗೆ ನಮ್ಮಸಮುದಾಯ ಪ್ರತಿನಿಧಿಸುವ ನಾಯಕತ್ವ ಗುಣ ಇಲ್ಲ. ಸಮುದಾಯ ನಾಯಕತ್ವ ವಹಿಸುವಷ್ಟು ಜಮೀರ್ ಮತ್ತು ಖಾದರ್ ಅರ್ಹರಲ್ಲ. ಜಮೀರ್ ನನ್ನ ಸೋಲಿಗೆ ಪ್ರಯತ್ನ ಮಾಡಿದವರು. ಬೇರೆ ಕಡೆಯಿಂದ ಬಂದ ಅವರಿಗೆ ಮಣೆ ಹಾಕಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿದ್ದೇನೆ ಎಂದು ತನ್ವೀರ್ ಸೇಠ್ ಹೇಳಿದರು.
ನನಗೆ ಸಚಿವ ಸ್ಥಾನ ನೀಡಿದರೆ ಉತ್ತರ ಕರ್ನಾಟಕಕ್ಕೆ ನೀಡಿದಂತೆ: ಶಾಸಕ ಶಿವಳ್ಳಿ
ಇದೇ ವೇಳೆ ಮಂತ್ರಿ ಸ್ಥಾನದ ಕುರಿತು ಮಾತನಾಡಲು ಆಗಮಿಸಿದ್ದ ಶಾಸಕ ಸಿಎಸ್ ಶಿವಳ್ಳಿ ಅವರು ಮಾತನಾಡಿ, ನಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪ್ರಮುಖವಾಗಿ ಕುರುಬ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು. ಸಮುದಾಯದಿಂದ ಯಾರಿಗೆ ಬೇಕಾದರೂ ಸಚಿವ ಸ್ಥಾನ ನೀಡಲಿ. ಆದರೆ ನನಗೆ ನೀಡಿದರೆ ಉತ್ತರ ಕರ್ನಾಟಕಕ್ಕೆ ನೀಡಿದಂತಾಗುತ್ತದೆ. ನಾನು ಉತ್ತರ ಕರ್ನಾಟಕ ಪ್ರಬಲ ನಾಯಕ. ಮೊದಲ ಪಟ್ಟಿಯಲ್ಲೇ ಸ್ಥಾನ ನೀಡಬೇಕಿತ್ತು. ಆದರೆ ಈಗ ವರಿಷ್ಠರೊಂದಿಗೆ ಮಾತನಾಡಿದ್ದೇನೆ.2ನೇ ಪಟ್ಟಿಯಲ್ಲಿ ಸ್ಥಾನ ದೊರೆಯುವ ವಿಶ್ವಾಸವಿದೆ ಎಂದು ಶಿವಳ್ಳಿ ಹೇಳಿದ್ದಾರೆ.