ಬೆಂಗಳೂರು: ನಾನು ಯಾವುದೇ ದುಬಾರಿ ಬ್ರ್ಯಾಂಡ್ ಗಾಗಿ ಒತ್ತಾಯಿಸಿಲ್ಲ. ಎಸ್ ಯುವಿ ಗಾಗಿ ವಿನಂತಿ ಮಾಡಿದ್ದೇನೆ.ನಾನು ಲೆಕ್ಸಸ್ ಅಥವಾ ಬಿಎಂಡಬ್ಲ್ಯೂ ಗಾಗಿ ಏನಾದರೂ ಬೇಡಿಕೆ ಇಟ್ಟಿದ್ದೆನಾ? ಮಾದ್ಯಮಗಳು ಇದನ್ನೇ ದೊಡ್ಡ ಸುದ್ದಿಯಾಗಿ ಮಾಡಿವೆ" ಸಚಿವ ಜಮೀರ್ ಅಹಮದ್ ಖಾನ್ ಮಾದ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
ನಾನೀಗ ಎಸ್ ಯುವಿಯನ್ನು ಬಳಸುತ್ತಿದ್ದೇನೆ.ಇದರಲ್ಲಿಯೇ ಜಿಲ್ಲೆಯ ಎಲ್ಲಾ ಭಾಗಗಳಿಗೆ ತೆರಳಬೇಕಿದೆ.ಸರ್ಕಾರದ ನಿಯಮಗಳಡಿಯಲ್ಲಿಯೇ ನಾನು ಉತ್ತಮ ಕಾರನ್ನು ನೀಡಿರೆಂದು ಕೇಳುತ್ತಿದ್ದೇನೆ."ಸಚಿವರು ಹೇಳಿದ್ದಾರೆ.
ಇನ್ನೋವಾ ಕಾರು ಕಡಿಮೆ ದರ್ಜೆಯದು, ಸಚಿವ ಅಧಿಕೃತ ಬಳಕೆಗಾಗಿ ಫಾರ್ಚೂನ್ ಕಾರು ಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರು ಸಚಿವ ಜಮೀರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.
ಜಮೀರ್ ಅಹಮದ್ ಖಾನ್ ತಾವು ಪ್ರಯಾಣಕ್ಕಾಗಿ ದೊಡ್ಡ ಕಾರ್ ಬೇಕೆಂದು ಕೇಳುತ್ತಿದ್ದಾರೆ. ಟೊಯೋಟಾ ಫಾರ್ಚೂನ್ ಕಾರಿಗೆ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಮಾದ್ಯಮಗಳಲ್ಲಿ ವರದಿಯಾಗಿತ್ತು.
ಏತನ್ಮಧ್ಯೆ ಚಾಮರಾಜಪೇಟೆ ಶಾಸಕರಾದ ಜಮೀರ್ ಅಹಮದ್ ಹಜ್ ಭವನಕ್ಕೆ ’ಟಿಪ್ಪು ಸುಲ್ತಾನ್ ಹಜ್ ಭವನ’ ಎಂದು ಮರುನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹಾಗೂ ವಿರೋಧ ಪಕ್ಷ ನಾಯಕ ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ.
"ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿಯೇ ಹಜ್ ಭವನವನ್ನು ಟಿಪ್ಪು ಸುಲ್ತಾನ್ ಹಜ್ ಭವನವೆಂದು ಮರು ನಾಮಕರಣ ಮಾಡಬೇಕೆನ್ನುವ ಬೇಡಿಕೆ ಇತ್ತು.ಈ ಕುರಿತಂತೆ ಸಾರ್ವಜನಿಕರು, ಉಲೇಮಾಗಳು ಒತ್ತಡ ಹಾಕುತ್ತಿದ್ದಾರೆ. ಇದರ ಕುರಿತಂತೆ ಮುಖ್ಯಮಂತ್ರಿ , ಉಪಮುಖ್ಯಮಂತ್ರಿ ಮತ್ತು ವಿರೋಧ ಪಕ್ಷಗಳ ನಾಯಕರೊಡನೆ ಮಾತನಾಡುತ್ತೇನೆ" ಅವರು ಹೇಳಿದ್ದಾರೆ.