ಬೆಂಗಳೂರು: ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸಮ್ಮಿಶ್ರ ಸರ್ಕಾರದ ಅವಧಿ ಎಷ್ಟು ದಿನ ಎಂಬ ಬಗ್ಗೆ ಚರ್ಚೆನಡೆಯುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗಳು ಸಮ್ಮಿಶ್ರ ಸರ್ಕಾರದ ಬುಡವನ್ನೇ ಅಲುಗಾಡಿಸುತ್ತಿವೆ, ಇದೇ ಬೆನ್ನಲ್ಲೇ ಧರ್ಮಸ್ಥಳಕ ಶಾಂತಿ ವನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ಶಾಸಕರ ತಂಡ ಬುಧವಾರ ಬೆಳಗ್ಗೆ ಹೊರಟಿದೆ.
ಸರ್ಕಾರ 5 ವರ್ಷ ನಡೆಯದು ಎನ್ನುವ ಸಿದ್ದರಾಮಯ್ಯನವರ ಹೇಳಿಕೆಯ ವಿಡಿಯೋ ಬಿಡುಗಡೆ ಬೆನ್ನಲ್ಲೇ ಶಾಸಕರ ಭೇಟಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅದರಲ್ಲೂ ಕೇವಲ ಅಹಿಂದ ಶಾಸಕರೇ ಸಿದ್ದರಾಮಯ್ಯರನ್ನು ಭೇಟಿ ಮಾಡುತ್ತಿರುವುದು ರಾಜಕೀಯ ಕೇಂದ್ರ ಬಿಂದುವಾಗಿದೆ,.
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅಥಣಿಯ ಮಹೇಶ್ ಕಮಟಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ್, ಬಳ್ಳಾರಿಯ ನಾಗೇಂದ್ರ, ಬಸವಕಲ್ಯಾಣದ ಬಿ.ನಾರಾಯಣ, ಮಸ್ಕಿಯ ಪ್ರತಾಪ್ಗೌಡ ಪಾಟೀಲ್, ರಾಯಚೂರು ಸಂಸದ ಬಿ.ವಿ.ನಾಯಕ್, ಎಂಎಲ್ಸಿ ವಿವೇಕ್ ರಾವ್ ಪಾಟೀಲ್ ಹಾಗೂ ರಾಯಚೂರಿನ ಬಸನಗೌಡ ದದ್ದಲ್ ಸಿದ್ದರಾಮಯ್ಯರನ್ನು ಭೇಟಿಯಾಗಲಿದ್ದಾರೆ. ಮುಂದಿನ ಬೆಳವಣೆಗೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.