ರಾಜಕೀಯ

ವಾಜಪೇಯಿ, ಅಡ್ವಾಣಿ ಮೌನವಾಗಿರದೇ ಇದ್ದಿದ್ದರೇ ನಿಜವಾದ ನರಹಂತಕರು ಯಾರು ಎಂದು ಹೇಳುತ್ತಿದ್ದರು!

Sumana Upadhyaya

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ ಎಂದು  ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ಬಿಜೆಪಿ ನಾಯಕರು ಬಳಸುವ ಭಾಷೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅವರ ಮಟ್ಟಕ್ಕೆ ನಾನು ಇಳಿಯಲು ಸಾಧ್ಯವಿಲ್ಲ. ಬಸವಣ್ಣನವರ ವಚನಗಳನ್ನು ಮಾತ್ರ ಉಲ್ಲೇಖಿಸಲು ನನಗೆ ಸಾಧ್ಯ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿರುವ ಮುಖ್ಯಮಂತ್ರಿ, ನಿಮ್ಮ ಸ್ವಂತ ಕ್ಷೇತ್ರ ಗೋರಕ್ ಪುರದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀವು ಅಧಿಕಾರಕ್ಕೆ ಬಂದ ನಂತರ 1250ಕ್ಕೂ ಹೆಚ್ಚು ಪುಟ್ಟ ಕಂದಮ್ಮಗಳು ಪ್ರಾಣ ಕಳೆದುಕೊಂಡಿವೆ. ಈಗ ಹೇಳಿ ಯಾರನ್ನು ನರಹಂತಕ ಎಂದು ಕರೆಯೋಣ ಎಂದು ಕೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮಾತನಾಡುವ ಸ್ಥಿತಿಯಲ್ಲಿದ್ದಿದ್ದರೆ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಮಾತನಾಡಲು ಅವಕಾಶ ನೀಡದರೆ ನರಹಂತಕರು ಯಾರು ಎಂದು ಅವರೇ ಹೇಳುತ್ತಿದ್ದರು. ಇಬ್ಬರು ನಾಯಕರ ಮೌನ ಬಿಜೆಪಿಯ ಮಾನ ಉಳಿಸಿದೆ ಎಂದು ಮುಖ್ಯಮಂತ್ರಿ ಅಣಕಿಸಿದ್ದಾರೆ.


ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಂದ್ರ ಮೋದಿಯವರು ವ್ಯಾಪಕ ಪ್ರಚಾರ ನಡೆಸಿದ್ದರೂ ಕೂಡ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಅವರ ಕಾಲ್ಗುಣ ಚೆನ್ನಾಗಿತ್ತು ಎಂದು ಸಿಎಂ ಪ್ರಧಾನಿ ಮೋದಿಯವರಿಗೂ ಟಾಂಗ್ ನೀಡಿದ್ದಾರೆ.

ಮಂಗಳೂರು ಹೊರವಲಯದ ಕುಳಾಯಿಯಲ್ಲಿ ನಿನ್ನೆ ನಡೆದ ಜನಸುರಕ್ಷಾ ಯಾತ್ರೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಮ್ಮ ಪಾದಯಾತ್ರೆ ಕಾಂಗ್ರೆಸ್ ದುರಾಡಳಿತಕ್ಕೆ ಅಂತ್ಯಹಾಡಲಿದೆ, ಬಿಜೆಪಿ ರಾಜ್ಯದಲ್ಲಿ ಹುಲಿ, ಚಿರತೆ, ಸಿಂಹವನ್ನು ನೋಡಿದ್ದೇವೆ. ನರಹಂತಕ ವೀರಪ್ಪನ್ ನ್ನೂ ನೋಡಿದ್ದೇವೆ. ಆದ್ರೆ ದೇಶದಲ್ಲಿ ಮುಖ್ಯಮಂತ್ರಿಗಳ ಪೈಕಿ ನರಹಂತಕ ಇದ್ರೆ ಸಿದ್ಧರಾಮಯ್ಯ ಮಾತ್ರ  ಎಂದು ಆಪಾದಿಸಿದ್ದರು.

SCROLL FOR NEXT