ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಿ, ಮತದಾರರನ್ನು ಸೆಳೆಯಲು ಮುಂದಾಗಿರುವ ಕಾಂಗ್ರೆಸ್ ಇದೇ 21ರಿಂದ ಎಂಬ ಘೋಷಣೆಯಡಿ ಪಾದಯಾತ್ರೆ ಹಮ್ಮಿಕೊಂಡಿದೆ.
ಕಾಂಗ್ರೆಸ್ ದುರಾಡಳಿತದಿಂದ ಬೆಂಗಳೂರು ರಕ್ಷಿಸಿ ಘೋಷಣೆಯಡಿ ಪಾದಯಾತ್ರೆ ನಡೆಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿವರಿಸುವ ಆರೋಪ ಪಟ್ಟಿ ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಲಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯ ವೈಫಲ್ಯ, ಭ್ರಷ್ಟಾಚಾರ ಮತ್ತು ಹಗರಣಗಳನ್ನು ಪರಿಚಯಿಸುವ ಹಾಗೂ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಸಾರುವ ಕಿರುಹೊತ್ತಿಗೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಬ್ರ್ಯಾಂಡ್ ಬೆಂಗಳೂರು ಹೆಸರು ಕೆಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆರೋಪ ಪಟ್ಟಿ ಹೆಸರಿನಲ್ಲಿ ಸುಳ್ಳುಗಳನ್ನೇ ಹೇಳಿದೆ. ದೇಶದ ಬೇರೆ ಬೇರೆ ಮಹಾ ನಗರಗಳ ಅಭಿವೃದ್ಧಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಂಬರ್ 1 ಸ್ಥಾನದಲ್ಲಿದೆ. ಬಿಜೆಪಿ ಅವಧಿಯ ಹಗರಣ, ಕಾಂಗ್ರೆಸ್ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಪಾದಯಾತ್ರೆ ನಡೆಸಲಾಗುವುದು ಎಂದು ವಿವರಿಸಿದರು.
ಸರ್ಕಾರದ ಸಾಧನೆ ಪರಿಚಯಿಸಲು ‘ನಮ್ಮ ಬೆಂಗಳೂರು ನಮ್ಮ ಸರ್ಕಾರ’ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಲಾಗಿದೆ. 28 ವಿಧಾನಸಭಾ ಕ್ಷೇತ್ರಗಳಲ್ಲಿನ ಮನೆ ಮನೆಗೂ ತೆರಳಿ ಕರಪತ್ರ ವಿತರಿಸಲಾಗುವುದು ಎಂದರು.