ರಾಜಕೀಯ

ವಿಧಾನಸಭಾ ಚುನಾವಣೆ: ವಿರಾಜಪೇಟೆಯಿಂದ ಬೋಪಯ್ಯಗೆ ಟಿಕೆಟ್ ನೀಡಿದರೆ ಸೋಲು: ಕೊಡವ ಸಂಘಟನೆ

Srinivas Rao BV
ಬೆಂಗಳೂರು: ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ದಿಸಲು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಇನ್ನೂ ಗೊಂದಲದಲ್ಲಿರುವಂತೆಯೇ ತೆರೆ ಮರೆಯಲ್ಲಿ ದಿನಕ್ಕೊಂದು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿರುವುದು, ಕ್ಷೇತ್ರದ ಬಿ.ಜೆ.ಪಿ ಟಿಕೆಟ್ ಆಕಾಂಕ್ಷಿಗಳ ಹೃದಯ ಬಡಿತ ಹೆಚ್ಚಾಗುವಂತೆ ಮಾಡಿದೆ. 
ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಬೋಪಯ್ಯ ಅವರು ಕೆಲವು ದಿನಗಳ ಹಿಂದೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅಪ್ ಡೇಟ್ ಮಾಡಿದ್ದ ಸ್ಟೇಟಸ್ ನ್ನು ಆಧರಿಸಿ ಕೆಜಿ ಬೋಪಯ್ಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ತೊರೆದು, ಕ್ಷೇತ್ರ ಬದಲಾವಣೆ ಮಾಡುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಸ್ಥಳೀಯ ಮಟ್ಟದಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಗಳೂ ಸಹ ಈ ವರದಿಗೆ ಪೂರಕವಾಗಿದೆ. ಈ ನಡುವೆ ತಾಜಾ ಬೆಳವಣಿಗೆಯಲ್ಲಿ ಸಂಘ ಪರಿವಾರದ ಮುಖಂಡರೊಬ್ಬರು ಕೊಡಗಿನ ಪ್ರಮುಖ ಸಂಘಟನೆಯೊಂದರ ಯುವ ಕೊಡವ ಮುಖಂಡರೊಬ್ಬರೊಂದಿಗೆ ಗೌಪ್ಯ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. 
ಟಿಪ್ಪು ಜಯಂತಿಯನ್ನು ಸಮರ್ಥವಾಗಿ ವಿರೋಧಿಸುವುದೂ ಸೇರಿದಂತೆ ಕೊಡವ ಸಮುದಾಯದ ಗೌರವ, ಆಶೋತ್ತರಗಳಿಗೆ, ಕೊಡವ ಸಂಸ್ಕೃತಿಗೆ ಬೋಪಯ್ಯ ಎಂದಿಗೂ ಧ್ವನಿಯಾಗಲಿಲ್ಲ ಎಂಬುದು ಸ್ಥಳೀಯ ಕೊಡವ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಬಾರಿಯೇ ಬೋಪಯ್ಯ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕೊಡವ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಪರಿಣಾಮವಾಗಿ 35 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕಾದ ಶಾಸಕರು 3 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿಯೂ ಕೊಡವ ಸಮುದಾಯದ ನಿರೀಕ್ಷೆಗೆ ವಿರುದ್ಧವಾಗಿ ಬೋಪಯ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದೇ ಆದಲ್ಲಿ, ಕೊಡವರ ಸಂಸ್ಕೃತಿ, ಆಶೋತ್ತರಗಳನ್ನು ಗೌರವಿಸುವ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸುವ ಚಿಂತನೆ ನಡೆಸಲಾಗಿದೆ ಎಂದು ಸಂಘಪರಿವಾರದ ಮುಖಂಡರೊಂದಿಗಿನ ಮಾತುಕತೆ ವೇಳೆ ಕೊಡವ ಸಂಘಟನೆಯ ಪ್ರಭಾವಿ ನಾಯಕರು ಹೇಳಿದ್ದಾರೆ. 
ಕ್ಷೇತ್ರದ ಅಭಿವೃದ್ಧಿಯೆಂದರೆ ಅದು ಬೆಂಗಳೂರಿನಂತಹ ನಗರದ ಅಭಿವೃದ್ಧಿಯ ಪಡಿಯಚ್ಚಾಗಬೇಕಿಲ್ಲ, ಅಲ್ಲಿನದ್ದನ್ನೇ ನಕಲು ಮಾಡುವ ಅಗತ್ಯವಿಲ್ಲ", ಕೊಡವರ ಆಶೋತ್ತರಗಳಿಗೆ ಸ್ಪಂದಿಸುವುದು, ಕೊಡವರ ಸಾಂಸ್ಕೃತಿಕ ತಾಣಗಳನ್ನು ಗೌರವಿಸಿ ಅಭಿವೃದ್ಧಿಪಡಿಸುವುದೂ ಸಹ ಶಾಸಕರ ಕರ್ತವ್ಯವಾಗಿರುತ್ತದೆ. ಆದರೆ ಶಾಸಕ ಬೋಪಯ್ಯ ಈ ವಿಷಯದಲ್ಲಿ ಹಿಂದುಳಿದಿದ್ದಾರೆ. ಕೊಡವ ಸಮುದಾಯವನ್ನು ಗೌರವಿಸುತ್ತಿಲ್ಲ ಎಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಸಮೀಕ್ಷೆ ನಡೆಸಲು ನಿಯೋಜಿಸಲಾಗಿರುವ ಸಂಘ ಪರಿವಾರದ ಮುಖಂಡರಿಗೆ ಕೊಡವ ಸಮುದಾಯದ ಮುಖಂಡರು ಹೇಳಿದ್ದಾರೆಂದು ಕನ್ನಡಪ್ರಭ.ಕಾಂ ಗೆ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.
ಒಟ್ಟು ಜನಸಂಖ್ಯೆಯಲ್ಲಿ ಶೇ.33 ರಷ್ಟು ಕೊಡವರೇ ಇರುವ ವಿರಾಜಪೇಟೆಯಿಂದ ಕಳೆದ 60 ವರ್ಷಗಳಲ್ಲಿ ಕೊಡವ ಸಮುದಾಯಕ್ಕಿಂತ ಹೆಚ್ಚು ಅನ್ಯ ಸಮುದಾಯದವರನ್ನೂ ಆರಿಸಿ ವಿಧಾನಸಭೆಗೆ ಕಳಿಸಲಾಗಿದೆ. ಆದರೆ ಕೊಡವರಿಗೆ ಸೂಕ್ತ ರಾಜಕೀಯ ಮನ್ನಣೆ ಸಿಕ್ಕಿಲ್ಲ. 1994 ರಲ್ಲಿ ಮಂಡ್ಯ ಮೂಲದವರಾದ ಹೆಚ್ ಡಿ ಬಸವರಾಜು ಅಂತಹ ನಾಯಕರನ್ನೂ ವಿರಾಜಪೇಟೆಯಿಂದ ಆರಿಸಿ ಕಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕ್ಷೇತ್ರದ ಶಾಸಕರು ಕೊಡವ ಸಮುದಾಯಕ್ಕೆ ಬೆಲೆ ನೀಡುತ್ತಿಲ್ಲ ಎಂಬುದೂ ಸಹ ಕೊಡವ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬಾರಿ ಕೊಡವ ಸಮುದಾಯದವರನ್ನೇ ಕ್ಷೇತ್ರದಿಂದ ಆರಿಸಿ ಕಳಿಸಬೇಕೆಂಬುದು ಕೊಡವ ಸಮಾಜದ ಪ್ರಮುಖ ಸಂಘಟನೆಗಳ ಚಿಂತನೆಯಾಗಿದೆ. 
ಕೆ.ಜಿ ಬೋಪಯ್ಯ ಹಾಲಿ ಶಾಸಕರಾಗಿದ್ದು, ಟಿಕೆಟ್ ನಿರಾಕರಿಸುವುದು ಕಷ್ಟಸಾಧ್ಯವಿದೆ, ಟಿಕೆಟ್ ನೀಡಿದರೆ ವಿರಾಜಪೇಟೆಯಲ್ಲಿ ನಿರ್ಣಾಯಕವಾಗಿರುವ ಕೊಡವರ ಓಟುಗಳೂ ಚದುರಿಹೋಗುವ ಸಾಧ್ಯತೆ ದಟ್ಟವಾಗಿದೆ.  ವಿರಾಜಪೇಟೆಯಿಂದ ಸ್ಪರ್ಧಿಸಲು ಸುಜಾ ಕುಶಾಲಪ್ಪ, ಮಾಚಿಮಾಡ ರವೀಂದ್ರ, ಪಟ್ಟಡ ರೀನಾ ಪ್ರಕಾಶ್, ಪತ್ರಕರ್ತ, ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಹೆಸರೂ ಕೇಳಿಬಂದಿದೆ. ಟಿಕೆಟ್ ಹಂಚಿಕೆ ನಿರ್ಧಾರ ಹೈಕಮಾಂಡ್ ಅಂಗಳದಲ್ಲಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಕುತೂಹಲದ ಕೇಂದ್ರ ಬಿಂದುವಾಗಿದ್ದು, ಹೈಕಮಾಂಡ್ ಗೆ ಸವಾಲಿನ ಕ್ಷೇತ್ರವಾಗುವ ಲಕ್ಷಣಗಳಿವೆ. 
-ಶ್ರೀನಿವಾಸ್ ರಾವ್
srinivasrao@newindianexpress.com
SCROLL FOR NEXT