ರಾಜಕೀಯ

ಚುನಾವಣೆ: ಪಕ್ಷಗಳಿಗೆ ವರವಾದ ಟ್ವಿಟರ್, ಫೇಸ್ ಬುಕ್; ಸಾಮಾಜಿಕ ಜಾಲತಾಣಗಳದ್ದೂ ಭಾರೀ ಸದ್ದು

Lingaraj Badiger
ಬೆಂಗಳೂರು: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ದಿಕ್ಸುಚಿ ಎಂದ ಭಾವಿಸಲಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಸಾಮಾಜಿಕ ಜಾಲತಾಣ ಭರ್ಜರಿ ಸದ್ದು ಮಾಡಿದ್ದು, ಅಕ್ಷರ ಯುದ್ಧವೇ ನಡೆದು ಹೋಗಿದೆ.
ರಾಷ್ಟ್ರದ ಗಮನ ಸೆಳೆದಿರುವ 15ನೇ ವಿಧಾನಸಭೆ ಚುನಾವಣೆ ಹಿಂದೆಂದೂ ಕಾಣದಷ್ಟು ಬಿರುಸಿನ ಸ್ಪರ್ಧೆಗೆ ಸಾಕ್ಷಿಯಾಗಿದ್ದು, ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬಹಿರಂಗ ವಾಗ್ದಾಳಿಯ ಜೊತೆಗೆ ಆಧುನಿಕ ಮಾಧ್ಯಮವಾದ ಟ್ವೀಟರ್ ಮತ್ತು ಫೇಸ್ ಬುಕ್ ನಲ್ಲೂ ವಾಕ್ಸಮರ ನಡೆಸಿದ್ದರು.
ಕಾಂಗ್ರೆಸ್ ಮತ್ತು ಬಿಜೆಪಿ ಪ್ರಮುಖವಾಗಿ ಟ್ವೀಟರ್ ಅನ್ನು ಅತಿ ಹೆಚ್ಚು ಬಳಸಿಕೊಂಡಿದ್ದು, ಪರಸ್ಪರ ಭ್ರಷ್ಟಾಚಾರದ ಆರೋಪ, ಪ್ರತ್ಯಾರೋಪ ನಡೆಸಿದ್ದವು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯ ಸೇರಿದಂತೆ ಹಲವು ನಾಯಕರು ಭರ್ಜರಿ ಟ್ವೀಟ್ ವಾರ್ ನಡೆಸಿದ್ದರು.
ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಇತ್ತೀಚಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ರಾಜ್ಯದ ಮತದಾರರ ಮನ ಗೆಲ್ಲಲು ಮೂರು ರಾಜಕೀಯ ಪಕ್ಷಗಳು ಎಲ್ಲಾ ರೀತಿಯ ಕಸರತ್ತು ನಡೆಸಿವೆ. ಆದರೆ ಮತದಾರನ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ರಾಜಕೀಯ ಪಕ್ಷಗಳು ಮಾತ್ರ ನಾವೇ ಗೆದ್ದೇ ಗೆಲ್ಲುತ್ತೇವೆ ಎಂಬ ಅದ್ಯಮ ವಿಶ್ವಾಸದಲ್ಲಿದ್ದಾರೆ.
SCROLL FOR NEXT