ರಾಜಕೀಯ

ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜಟಾಪಟಿ: ಸಿದ್ದರಾಮಯ್ಯಗಾಗಿ ಕಾಂಗ್ರೆಸ್ ಪಟ್ಟು; ಕೇಂದ್ರ ನಾಯಕರಿಗಾಗಿ ಜೆಡಿಎಸ್ ಹಠ

Shilpa D
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ವಾರ ಕಳೆದಿದ್ದು ಪ್ರಮುಖ ಖಾತೆಗಳ ಹಂಚಿಕೆ ವಿಚಾರವಾಗಿ ಎರಡು ಪಕ್ಷಗಳು ಒಮ್ಮತಕ್ಕೆ ಬಂದಿವೆ. ಈ ಬೆನ್ನಲ್ಲೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಗೆ ಅಧ್ಯಕ್ಷರ ಆಯ್ಕೆ ವಿಚಾರ ದೊಡ್ಡ ಸವಾಲಾಗಿದೆ.
9 ಸದಸ್ಯರುಳ್ಳ ಸಮನ್ವಯ ಸಮಿತಿ ರಚನೆಗೆ ಎರಡು ಪಕ್ಷಗಳು ಒಪ್ಪಿವೆ ಎಂದು ಮೂಲಗಳು ತಿಳಿಸಿವೆ,  ಕಾಂಗ್ರೆಸ್ ನಿಂದ 5 ಹಾಗೂ ಜೆಡಿಎಸ್ ನಿಂದ 4 ಮುಖಂಡರು ಸಮಿತಿಯಲ್ಲಿರಲಿದ್ದಾರೆ, ಆದರೆ ಈಗ ಸದ್ಯ ಎದುರಾಗಿರುವುದು ಸಮನ್ವಯ ಸಮಿತಿ ಅಧ್ಯಕ್ಷರು ಯಾರು ಎಂಬ ಪ್ರಶ್ನೆ,  ರಾಜ್ಯ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮಿತಿಯ ಅಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅಥವಾ ಗುಲಾಂ ನಬಿ ಆಜಾದ್ ಸಮಿತಿಯ ಅಧ್ಯಕ್ಷರಾಗಬೇಕೆಂದು ಜೆಡಿಎಸ್ ಬಯಸಿದೆ.
ಸಮಿತಿಯಲ್ಲಿ ಸಿಎಂ ಕುಮಾರ ಸ್ವಾಮಿ ಕೂಡ ಒಬ್ಬರಾಗಿದ್ದು ಎರಡು ಪಕ್ಷಗಳ ಪ್ರಣಾಳಿಕೆಯಲ್ಲಿದ್ದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಪ್ರಮುಖ ಉದ್ದೇಶವಾಗಿದೆ, ಜೊತೆಗೆ ಸರ್ಕಾರ ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಸಮನ್ವಯ ಸಮಿತಿ ಜೊತೆ ಚರ್ಚಿಸಬೇಕಾಗುತ್ತದೆ, ರಾಜ್ಯ ಕಾಂಗ್ರೆಸ್ ನಾಯಕರು ಸಮಿತಿಗೆ ಸಿದ್ದರಾಮಯ್ಯ ಸಮರ್ಥರು ಎಂದು ಅಭಿಪ್ರಾಯ ಪಟ್ಟಿದ್ದಾರೆ, ಆದರೇ ಜೆಡಿಎಸ್ ಸಿದ್ದರಾಮಯ್ಯ ಬದಲಿಗೆ ಕೇಂದ್ರ ನಾಯಕರೇ ಆಗಬೇಕೆಂದು ಹಠ ಹಿಡಿದಿದೆ ಎಂದು ತಿಳಿದು ಬಂದಿದೆ.ಆದರೆ ಸಿದ್ದರಾಮಯ್ಯ ನಾಯಕತ್ವಕ್ಕೆ ಜೆಡಿಎಸ್ ವಿರೋಧವಿದೆ ಎನ್ನಲಾಗಿದೆ.
ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ, ಆದರೆ ಜೆಡಿಎಸ್ ತನ್ನ ಅಭಿಪ್ರಾಯವನ್ನು ಮಾತ್ರ ಸೂಚಿಸಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
SCROLL FOR NEXT