ಬೆಂಗಳೂರು: ರಾಜ್ಯದ ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ಬರಸಿಡಿಲಿನಂತಾಗಿದ್ದರೆ, ಕಾಂಗ್ರೆಸ್-ಜೆಡಿಎಸ್ ಗೆ ಹಲವು ಕಾರಣಗಳಿಂದಾಗಿ ಡಬಲ್ ಧಮಾಕ ರೀತಿ ಕಾಣುತ್ತಿದೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆ ಸಿಕ್ಕಿರುವುದು ದಶಕದ ನಂತರ ಸಿಕ್ಕಿರುವ ಗೆಲುವಾದರೆ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿದ್ದ ಶಿವರಾಮೇಗೌಡರ ಗೆಲುವು ಹೊಸ ಇತಿಹಾಸ ನಿರ್ಮಿಸಿದೆ.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಶಿವರಾಮೇಗೌಡರು, 3,24,377 ಮತಗಳ ಅಂತರದಿಂದ ಗೆದ್ದಿದ್ದು, ಬಿಜೆಪಿ ಅಭ್ಯರ್ಥಿಗೆ 2,44,377 ಮತಗಳು ದೊರೆತಿವೆ. ಈ ಹಿಂದೆ 1,81,000 ಮತಗಳ ಅಂತರದಿಂದ ಗೆದಿದ್ದ ಅಂಬರೀಶ್ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ದಾಖಲೆ ನಿರ್ಮಿಸಿದ್ದರು. ಈಗ ಆ ದಾಖಲೆಯನ್ನು ಶಿವರಾಮೇಗೌಡರು ಮುರಿದಿದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ವೈಯಕ್ತಿಕವಾಗಿ ಶಿವರಾಮೇಗೌಡರಿಗೂ ಸಹ ಈ ಚುನಾವಣೆಯ ಫಲಿತಾಂಶ ರಜಾಕೀಯ ಪುನರ್ಜನ್ಮವಾಗಿದ್ದು, ಬರೊಬ್ಬರಿ 2 ದಶಕಗಳ ನಂತರ ಚುನಾವಣಾ ರಾಜಕಾರಣದಲ್ಲಿ ಯಶಸ್ಸು ದಕ್ಕಿದೆ.