ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಚಿವಾಕಾಂಕ್ಷಿ ಶಾಸಕರು, ಉತ್ತಮ ಸಾಧನೆ ಮಾಡದ ಸಚಿವರನ್ನು ತೆಗೆದು ತಮ್ಮನ್ನು ಮಂತ್ರಿಯನ್ನಾಗಿ ಹೈಕಮಾಂಡ್ ಮಾಡುತ್ತದೆ ಎಂದು ಆಸೆ ಹೊತ್ತವರಿಗೆ ನಿರಾಸೆಯುಂಟಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿಂದ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ, ಅಸಮಾಧಾನ, ಗೊಂದಲಗಳನ್ನೇ ಕಂಡಿದ್ದ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಸಚಿವರ ಸಾಧನೆ ಪರಿಶೀಲನೆ ಮಾಡಿ ರೊಟೇಶನ್ ಮೇಲೆ ಸಚಿವ ಸ್ಥಾನ ನೀಡುವ ಯೋಜನೆಯನ್ನು ಕೈ ಬಿಡಲಾಗಿದೆ.
ಆರಂಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ 16 ಸಚಿವರುಗಳನ್ನು ಸೇರಿಸಿಕೊಳ್ಳುವಾಗ 6 ತಿಂಗಳ ನಂತರ ಸಚಿವರ ಕೆಲಸ, ಸಾಧನೆಗಳನ್ನು ಮೌಲ್ಯಮಾಪನ ಮಾಡಿ ರೊಟೇಶನ್ ಆಧಾರದಲ್ಲಿ ಸಚಿವ ಹುದ್ದೆ ನೀಡಲು ತೀರ್ಮಾನಿಸಲಾಗಿತ್ತು. ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಆರು ತಿಂಗಳನ್ನು ಪೂರೈಸಲು ಇನ್ನು ಒಂದೇ ದಿನ ಬಾಕಿ ಉಳಿದಿದ್ದು, ರೊಟೇಶನ್ ಆಧಾರದಲ್ಲಿ ಸಚಿವ ಸ್ಥಾನ ನೀಡುವ ಯೋಜನೆಯನ್ನು ಕಾಂಗ್ರೆಸ್ ಕೈಬಿಟ್ಟಿದೆ. ಆಂತರಿಕ ಭಿನ್ನಾಭಿಪ್ರಾಯ, ಅಸಮಾಧಾನ ಮತ್ತು ಕಲಹಕ್ಕೆ ಕಾರಣವಾಗಬಹುದು ಎಂಬುದು ಹೈಕಮಾಂಡ್ ಯೋಚನೆಯಾಗಿದೆ.
ಪ್ರಸ್ತುತ ಕಾಂಗ್ರೆಸ್ ನಲ್ಲಿ ಸಚಿವರ ಮೌಲ್ಯಮಾಪನವೂ ನಡೆಯುವುದಿಲ್ಲ ಮತ್ತು ರೊಟೇಶನ್ ಆಧಾರದಲ್ಲಿ ಸಚಿವ ಸ್ಥಾನ ಕೂಡ ನೀಡುವುದಿಲ್ಲ, ಬದಲಿಗೆ ಸಚಿವ ಸಂಪುಟ ವಿಸ್ತರಣೆಯನ್ನು ಇನ್ನು ಕೆಲವು ಶಾಸಕರನ್ನು ಸಚಿವರನ್ನಾಗಿ ನೇಮಿಸಲಾಗುವುದು. ಸಂಪುಟ ವಿಸ್ತರಣೆ ನಮ್ಮ ಆದ್ಯತೆಯಾಗಿದೆ. ಸಚಿವರ ಕೆಲಸವನ್ನು ಮೌಲ್ಯಮಾಪನ ಮಾಡಲು 6 ತಿಂಗಳು ಅಲ್ಪಾವಧಿಯಾಗಿದೆ. ಅವರಿಗೆ ಕಡಿಮೆಯೆಂದರೂ ಒಂದು ವರ್ಷ ಅವಧಿ ನೀಡಬೇಕು ಎನ್ನುತ್ತಾರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್.