ಬಳ್ಳಾರಿ: ನಿಮ್ಮನ್ನು ಟೀಕೆ ಮಾಡಿದರೆ ನಮ್ಮ ವಿರುದ್ಧ ಜಾತಿ ಎತ್ತಿಕಟ್ಟುವ ಕೆಲಸ ಮಾಡುತ್ತೀರಾ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಳ್ಳಾರಿ ಉಪ ಚುನಾವಣೆ ಕಣ ರಂಗೇರಿದ್ದು, ನಿನ್ನೆ ಶ್ರೀರಾಮುಲುಗೆ 420 ಗೊತ್ತು 377 ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀರಾಮುಲು ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯವನ್ನು 420 ಎಂದು ಕರೆದಿದ್ದಾರೆ ಎಂದು ಜಾತಿ ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದರು. ಇದಕ್ಕೆ ಇಂದು ಹೊಸಪೇಟೆಯಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ, ನಿಮ್ಮನ್ನು ಟೀಕೆ ಮಾಡಿದರೆ ನೀವು ಅದಕ್ಕೆ ಜಾತಿ ಬಣ್ಣ ಬಳಿಯಲು ಯತ್ನಿಸುತ್ತೀರಾ. ಹಾಗಾದರೆ ನನ್ನನ್ನು ತೆಗಳಿದರೆ ಕುರುಬರನ್ನು ತೆಗಳಿದಂತೆಯೇ.. ನನ್ನ ತಪ್ಪು ತೋರಿಸಿದರೆ ಕುರುಬರು ತಪ್ಪು ಮಾಡಿದಂತೆಯೇ? ಎಂದು ಪ್ರಶ್ನಿಸಿದರು.
ಈ ವೇಳೆ ಶ್ರೀರಾಮುಲು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು, 'ಶ್ರೀರಾಮುಲು ಮಾಡಿದ ತಪ್ಪಿನಿಂದ ಈ ಚುನಾವಣೆ ಬಂದಿದೆ. ರಾಜೀನಾಮೆ ನೀಡಲು ಬಳ್ಳಾರಿ ಜನ ಹೇಳಿರಲಿಲ್ಲ. ರಾಜೀನಾಮೆ ನೀಡ್ತಿನಿ ಅಂತಾ ಬಳ್ಳಾರಿ ಜನರನ್ನು ಶ್ರೀರಾಮುಲು ಕೇಳಿಯೂ ಇಲ್ಲ. ರಾಜ್ಯದಲ್ಲಿ ಅಧಿಕಾರ ಹಿಡಿಯುವ ಆಸೆಯಿಂದ ರಾಮುಲು ರಾಜಿನಾಮೆ ನೀಡಿದ್ದರು. ಆ ಮೂಲಕ ಬಳ್ಳಾರಿ ಜನರ ನಂಬಿಕೆಗೆ ಶ್ರೀರಾಮುಲು ದ್ರೋಹ ಬಗೆದಿದ್ದಾರೆ. ಶ್ರೀರಾಮುಲು ಮತ್ತು ಬಿಜೆಪಿ ಅಭ್ಯರ್ಥಿ ಶಾಂತಾರಿಗೆ ತಕ್ಕ ಪಾಠ ಕಲಿಸಲು ನಿಮಗೆ ಅವಕಾಶ ಬಂದಿದೆ. ಉಗ್ರಪ್ಪ ಆಯ್ಕೆಯಾಗುವುದು ಸೂರ್ಯ ಹುಟ್ಟುವಷ್ಟೇ ಸತ್ಯ. ಈ ಹಿಂದೆ ಯಾವ ಸರ್ಕಾರವೂ ಮಾಡದ ಕೆಲಸವನ್ನು ನಾನು ಮಾಡಿದ್ದೇನೆ. ಎಲ್ಲ ಜಾತಿ, ಧರ್ಮದ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದೇವೆ ಎಂದರು.
ಅಂತೆಯೇ, 'ಬಿಜೆಪಿ ಸರ್ಕಾರದಲ್ಲಿ ಗಣಿ ಅದಿರು ಲೂಟಿ ಹೊಡೆದಿದ್ದು ಬಿಟ್ಟರೆ ಬೇರೇನು ಕೊಡುಗೆ ಕೊಟ್ಟಿಲ್ಲ. ನಾನು ಹೂವಿನಹಡಗಲಿಯಲ್ಲಿ ಮಾತನಾಡುವಾಗ ಹೇಳಿದ್ದೆ ಶ್ರೀರಾಮುಲುಗೆ 371 ಜೆ ಗೊತ್ತಿಲ್ಲ ಎಂದು. ಅವರಿಗೆ ಗೊತ್ತಿರೋದು 307, 302, 420 ಅಂತಹ ಐಪಿಸಿ ಸೆಕ್ಷನ್ಗಳು ಮಾತ್ರ ಎಂದಿದ್ದೆ. ನಾನೂ ಲೋಕಸಭೆಯಲ್ಲಿ ಮಾತನಾಡಿದ್ದೀನಿ ಎನ್ನುವ ಅವರು ಅದೇನು ಮಾತನಾಡಿದ್ದರೋ ಎಂದು ನನಗಂತೂ ಗೊತ್ತಿಲ್ಲ. ಅವರಿಗೆ ಏನು ಗೊತ್ತಿದೆ ಎಂದು ಮಾತನಾಡುತ್ತಾರೆ? ಬಿಜೆಪಿ 371ಜೆ ಜಾರಿ ಅಸಾಧ್ಯ ಎಂದು ಹೇಳಿತ್ತು. ಈ ಇತಿಹಾಸ ನಿಮಗೆ ಗೊತ್ತೇನ್ರಿ ರಾಮುಲು? ಎಂದು ಪ್ರಶ್ನಿಸಿದರು.
ಸ್ವತಃ ರಾಮುಲು ಎಸ್ಟಿ ಜನಾಂಗದಲ್ಲಿ ಹುಟ್ಟಿದ್ದೀರಿ. ಲೋಕಸಭೆಯಲ್ಲಿ ಎಸ್ಸಿ/ಎಸ್ಟಿ ಬಗ್ಗೆ ಅವರ ವಿಶೇಷ ಅನುದಾನದ ಬಗ್ಗೆ ಮಾತನಾಡಿದ್ದೀರೇನ್ರಿ ರಾಮುಲು? ಶ್ರೀರಾಮುಲು ನಿಮಗೆ ನಾಚಿಕೆ ಆಗಲ್ವಾ? ರೀ ರಾಮುಲು ಯಾಕ್ರೀ ಜಾತಿ ಪ್ರೊಟೆಕ್ಷನ್ ತಗೋತಿರಾ? ವಿಧಾನಸೌಧದ ಮುಂದೆ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಕಾಂಗ್ರೆಸ್. ನಾಯಕ ಸಮುದಾಯಕ್ಕೆ ನಿಮ್ಮ ಕೊಡುಗೆ ಏನ್ರೀ ರಾಮುಲು? ಜನರನ್ನು ಪದೇ ಪದೇ ದಾರಿ ತಪ್ಪಿಸಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos