ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗನ ಸಾವಿನ ಕುರಿತು ರಾಜಕೀಯ ವಲಯದಲ್ಲಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಅವರ ಕ್ಷಮೆ ಕೋರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಕ್ಷಮಿಸುವುದು ದೊಡ್ಡ ಗುಣ ಎಂದು ಹೇಳಿದ್ದಾರೆ.
ರೆಡ್ಡಿಗೆ ಸಂಸ್ಕೃತಿಯೂ ಇಲ್ಲ ಮನುಷ್ಯತ್ವವೂ ಇಲ್ಲ. ಯಾರಾದರೂ ಅಂಥಾ ಮಾತುಗಳನ್ನು ಆಡುತ್ತಾರಾ, ಸಾರ್ವಜನಿಕ ಜೀವನದಲ್ಲಿ ಇಂಥಹ ಮಾತುಗಳನ್ನು ಒಪ್ಪಿಕೊಳ್ಳುವುದಕ್ಕೆ ಆಗುತ್ತದೆಯೇ, ನನ್ನ ಮಗನ ಸಾವಿನ ಬಗ್ಗೆ ಮಾತನಾಡಿರುವುದನ್ನು ಸಮಾಜದಲ್ಲಿ ಯಾರಾದಾರೂ ಸಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ
ಸಿದ್ದರಾಮಯ್ಯ ಹೇಳಿದ ತಕ್ಷಣವೇ ಯಾರನ್ನಾದರೂ ಜೈಲಿಗೆ ಕಳುಹಿಸಲು ಸಾಧ್ಯವೇ. ಅವರು ಜೈಲಿಗೆ ಹೋಗಿರುವುದು ಅವರು ಮಾಡಿದ ಅಕ್ರಮದಿಂದ. ಜನಾರ್ದನ ರೆಡ್ಡಿ ಸಂಸ್ಕೃತಿ, ಮಾನವೀಯತೆ ಗೊತ್ತಿಲ್ಲದ ವ್ಯಕ್ತಿ. ಕ್ರಿಮಿನಲ್ ಆಗಿ ಯೋಚನೆ ಮಾಡುವ ವ್ಯಕ್ತಿಗೆ ಅದೇ ರೀತಿಯ ಯೋಚನೆಗಳು ಬರುತ್ತದೆ. ಚುನಾವಣೆ ವೇಳೆ ಟೀಕೆ ಆರೋಪಗಳನ್ನು ಮಾಡುತ್ತೇವೆ. ಆದರೆ, ವೈಯಕ್ತಿಕವಾಗಿ ಕುಟುಂಬವನ್ನು ಗುರಿಯಾಗಿಸುವುದು ಒಳ್ಳೆಯದಲ್ಲ ಎಂದರು.
ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ರಿಪಬ್ಲಿಕ್ ಆಫ್ ಬಳ್ಳಾರಿ ಆಗಿದೆ ವರದಿ ನೀಡಿದ್ದು ಫ್ಯಾಕ್ಟ್ ಅಲ್ಲವೆ ಎಂದು ಪ್ರಶ್ನಿಸಿದರು. 'ಜನಾರ್ದನ ರೆಡ್ಡಿ ಏನು ರಾಜಮನೆತನದಿಂದ ಬಂದವರಾ, ಮಗಳ ಮದುವೆ ಹೇಗೆ ಮಾಡಿದ್ರು, ದುಡ್ಡು ಎಲ್ಲಿಂದ ಬಂತು ಎಂದು ಕಿಡಿ ಕಾರಿದರು.