ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನಾಲ್ವರು ಮುಖಂಡರನ್ನು ಕೆಲ ಗಂಟೆ ಕಳೆಯುವುದರಲ್ಲಿ ದಿಡೀರ್ ಸದಸ್ಯತ್ವ ರದ್ದುಪಡಿಸಿದ ಘಟನೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ನಡೆದಿದೆ.
ಇಂದು ಬೆಳೆಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಯಾದಗಿರಿ ಜಿಲ್ಲೆಯ ಬಿಜೆಪಿ ಮುಖಂಡರಾದ ಭೀಮಾಮೇಟಿ , ದೇವೇಂದ್ರಪ್ಪ ಮುನಾಮಟ್, ಸಿದ್ದಪ್ಪ ಗುಂಡಳ್ಳಿ, ಭೀಮಾರೆಡ್ಡಿ ಜಟಮಲ್ಲಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗೂಂಡೂರಾವ್ ಅವರು ಪಕ್ಷದ ಬಾವುಟ ನೀಡಿ, ಶಾಲು ಹೊದಿಸಿ ಸದಸ್ಯತ್ವ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಇದಾದ ಕೆಲವೇ ಗಂಟೆಗಳಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರಕಾಶ್ ರಾಥೋಢ್ ಇಂದು ಪಕ್ಷ ಸೇರ್ಪಡೆಗೊಂಡ ಸದಸ್ಯತ್ವವನ್ನೇ ರದ್ದುಗೊಳಿಸಿ ಆದೇಶಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಿಂದ ಹೆಚ್ಚಿನ ಮಾಹಿತಿ ಪಡೆದ ಬಳಿಕ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ್ ಹಾಗೂ ಶಾಸಕರಾದ ಶರಣ ಬಸಪ್ಪ ದರ್ಶನಾಪುರ್ ಅವರು ನಾಲ್ವರು ಬಿಜೆಪಿ ಮುಖಂಡರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಸ್ಥಳೀಯ ನಾಯಕರ ಒಪ್ಪಿಗೆ, ಪಕ್ಷ ಸೇರ್ಪಡೆಗೆ ಶಿಫಾರಸ್ಸು, ಒತ್ತಾಯವಿಲ್ಲದಿದ್ದರೂ ನಾಲ್ವರು ಕೆಪಿಸಿಸಿ ಅಧ್ಯಕ್ಷರ ಸಮಕ್ಷಮದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಬಳಿಕ ಜಿಲ್ಲಾಧ್ಯಕ್ಷ ಹಾಗೂ ಶಾಸಕರು ಕೆಪಿಸಿಸಿ ಅಧ್ಯಕ್ಷರಿಗೆ ಕರೆ ಮಾಡಿ ತರಾಟೆ ತೆಗೆದುಕೊಂಡರು ಎನ್ನಲಾಗಿದೆ.
ಈ ಬೆಳೆವಣಿಗೆಯಿಂದ ಗಲಿಬಿಲಿಗೊಂಡ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷ ಸೇರ್ಪಡೆಗೊಂಡ ನಾಲ್ವರ ಸದಸ್ವತ್ವವನ್ನು ರದ್ದು ಮಾಡಿದ್ದಾರೆ.