ಬೆಂಗಳೂರು: 9 ದಿನಗಳ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಜೆಡಿಎಸ್ ಮಾಡುವುದಿಲ್ಲ ಎಂದು ಪಕ್ಷದ ವರಿಷ್ಠ ಹೆಚ್ . ಡಿ. ದೇವೇಗೌಡ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಸರ್ಕಾರ ಪತನಗೊಂಡಿದ್ದರೂ ದೇವೇಗೌಡರ ಉತ್ಸಾಹ ಕುಂದಿಲ್ಲ, ಪಕ್ಷ ಸಂಘಟನೆ ನಿಟ್ಟಿನಲ್ಲಿ ನಿರತರಾಗಿದ್ದಾರೆ.
ರಾಹುಲ್ ಗಾಂಧಿ ಕಾಂಗ್ರೆಸ್ ಚಟುವಟಿಕೆಗಳಿಂದ ದೂರವಿದ್ದರೆ ದೇವೇಗೌಡರ ವಯಸ್ಸು 87 ಆದರೂ ಪ್ರತಿದಿನ ಕಚೇರಿಯಲ್ಲಿಯೇ ಇರುತ್ತಾರೆ. ಹಳೆಯ ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತೆ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ . ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಮೈತ್ರಿ ಬಗ್ಗೆ ಈಗಲೂ ನಾವು ಮುಕ್ತವಾಗಿದ್ದೇವೆ . ನಮ್ಮೊಂದಿಗೆ ಸಹಕರಿಸಿದರೆ ಕಾಂಗ್ರೆಸ್ ಜೊತೆಗೆ ಮೈತ್ರಿ ಮುಂದುವರೆಸುವುದಾಗಿ ಹೇಳಿದರು.
ಉಪ ಚುನಾವಣೆಯಲ್ಲಿ ಗೆದ್ದು ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ಇಲ್ಲ. ಯಡಿಯೂರಪ್ಪ ಸರ್ಕಾರ ಬಂದು 9 ದಿನಗಳಾಗಿದೆ. 3.8 ವರ್ಷ ಆಡಳಿತ ನಡೆಸಲಿ , ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಮುಂದಾಗುವುದಿಲ್ಲಎಂದು ಸ್ಪಷ್ಪಪಡಿಸಿದರು.
ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ, ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ.ಯಾವುದೇ ಪಕ್ಷದೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು.
ಕುಮಾರಸ್ವಾಮಿ ಮಂಡಿಸಿದ ಬಜೆಟ್ ಆಗಿದ್ದರಿಂದ ಅದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ, ಪೂರಕ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರು ಪ್ರಜ್ಞಾವಂತರಾಗಿದ್ದು, ಸಮಯ ಬಂದಾಗ ಸರಿಯಾಗಿ ತೀರ್ಪು ನೀಡುತ್ತಾರೆ. ಪಕ್ಷದ ಬಲವರ್ದನೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಾಗಿ ದೇವೇಗೌಡ ತಿಳಿಸಿದರು.
ಇದೇ ವೇಳೆ ಇತ್ತೀಚಿಗೆ ಮೃತಪಟ್ಟ ಎಸ್ ಎಂ ಕೃಷ್ಣ ಅಳಿಯ ಹಾಗೂ ಉದ್ಯಮಿ ಸಿದ್ದಾರ್ಥ್ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, 1988-89ರಿಂದಲೂ ಸಿದ್ದಾರ್ಥ್ ಬಗ್ಗೆ ಗೊತ್ತು. 50 ಸಾವಿರ ಕುಟುಂಬಗಳು ಅವರ ಮೇಲೆ ಅವಲಂಬಿತರಾಗಿದ್ದಾರೆ. ಸ್ವಾಭಿಮಾನಿಯಾಗಿ ಬದುಕಿದ್ದರು. ಬ್ಯಾಂಕುಗಳನ್ನು ಅವರು ಏಕೆ ಕೋರಲಿಲ್ಲ ಎಂಬುದು ನನ್ನಗೆ ಗೊತ್ತಿಲ್ಲ. ನನ್ನ ರಾಜಕೀಯ ಜೀವನದಲ್ಲಿ ನೋಡಿದ ದೊಡ್ಡ ದುರ್ಘಟನೆಗಳಲ್ಲಿ ಇದು ಒಂದಾಗಿದೆ. ಐಟಿ ದಾಳಿಗಳ ಬಗ್ಗೆ ನೋಡಿದ್ದೇನೆ. ಆದರೆ, ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.