ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡಿರುವ ಬಿಎಸ್ ಯಡಿಯೂರಪ್ಪ ಅವರಿಗೆ ತಮ್ಮ ಕುರ್ಚಿಯನ್ನು ಭದ್ರವಾಗಿಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಸಂಪುಟ ವಿಸ್ತರಣೆಯಾಗದಿರುವುದು ಆರಂಭಿಕ ಸಮಸ್ಯೆಯಾಗಿ ಶುರುವಾಗಿದೆ, ಇದರಿಂದ ಆಂತರಿಕ ಭಿನ್ನಾಭಿಪ್ರಾಯ ಪ್ರಾರಂಭಕ್ಕೆ ನಾಂದಿಯಾಗಿದೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಇದ್ದ ಆತುರ ಸರ್ಕಾರ ನಡೆಸಲು ಇಲ್ಲ, ಇದು ಬಿಜೆಪಿ ಸರ್ಕಾರಕ್ಕೆ ಮಾರಕವಾಗುವಂತಿದೆ.
17 ಅನರ್ಹ ಶಾಸಕರು, ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರು, ಪಕ್ಷದ ಹೈಕಮಾಂಡ್, ಹಾಗೂ ತಮ್ಮ ಅನುಯಾಯಿಗಳಿಗೆ ಆದ್ಯತೆ ನೀಡುವುದು, ಜೊತೆಗೆ ಸಮುದಾಯದವರಿಗೆ ಪ್ರಾಮುಖ್ಯತೆ ನೀಡುವ ವಿಷಯಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಈಗಾಗಲೇ ಸಂಕಟದಲ್ಲಿ ಸಿಲುಕುವಂತೆ ಮಾಡಿದೆ.
ಯಡಿಯೂರಪ್ಪ ಸಂಪೂರ್ಣವಾಗಿ ಕೇಂದ್ರ ನಾಯಕರ ನಿರ್ಧಾರಗಳ ಮೇಲೆ ಅವಲಂಬಿತವಾಗಿದ್ದಾರೆ,ಎಲ್ಲದಕ್ಕೂ ಅಮಿತ್ ಶಾ ನಿಯಂತ್ರಣವಿದೆ, ಸಂಪುಟ ವಿಸ್ತರಣೆ ಮುಂದೂಡುವ ಮೂಲಕ ಯಡಿಯೂರಪ್ಪ ಅವರ ಅಧಿಕಾರವನ್ನು ಮೊಟಕುಗೊಳಿಸುತ್ತಿದ್ದಾರೆ, ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಪವರ್ ಫುಲ್ ಮ್ಯಾನ್ ಯಡಿಯೂರಪ್ಪ ಅವರ ಶಕ್ತಿ ಕುಂದುತ್ತಿದೆ.
ಕೇಂದ್ರ ನಾಯಕರ ಮೇಲಿನ ಅವಲಂಬನೆ ಜೊತೆಗೆ ಪಕ್ಷದಲ್ಲೇ ಯಡಿಯೂರಪ್ಪ ವಿರೋಧಿ ಬಣವಿರುವುದು ಸಿಎಂ ಬಿಎಸ್ ವೈಗೆ ಮತ್ತೊಂದು ಸಮಸ್ಯೆಯಾಗಿದೆ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗದ ಯಡಿಯೂರಪ್ಪ ಕೇಂದ್ರದತ್ತ ಮುಖಮಾಡುವುದು ಹಲವರನ್ನು ಕೆರಳಿಸಿದೆ.
ಸಮನ್ವಯ ಸಮಿತಿ ಸಭೆ ಕರೆದು ಚರ್ಚಿಸಿ, ಯಾರ್ಯಾರು ಸಂಪುಟ ಸೇರಬೇಕು ಎನ್ನುವುದರ ಬಗ್ಗೆ ನಿರ್ಧರಿಸಬೇಕಿತ್ತು,ಅನಂತರ ಅದರ ಅನುಮೋದನೆಗಾಗಿ ಕೇಂದ್ರ ನಾಯಕರ ಬಳಿಗೆ ಕಳುಹಿಸಬೇಕು, ಏನಾದರೂ ಬದಲಾವಣೆಯಿದ್ದರೇ ಅದನ್ನು ರಾಜ್ಯ ನಾಯಕರ ಗಮನಕ್ಕೆ ತಂದು ನಂತರ ಬದಲಾವಣೆ ಮಾಡಬೇಕು, ಎಲ್ಲರನ್ನು ಒಟ್ಟಿಗೆಕರೆದುಕೊಂಡು ಕೆಲಸ ಮಾಡುವ ಮನೋಭಾವ ಯಡಿಯೂರಪ್ಪ ಅವರಿಗೆ ಇಲ್ಲ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನ ಪತನಗೊಳಿಸಲು ಆಯುಧವನ್ನಾಗಿ ಬಳಸಿಕೊಂಡಿದ್ದ 17 ಶಾಸಕರು ಈಗಾಗಲೇ ಯಡಿಯೂರಪ್ಪ ಅವರ ಮೇಲೆ ಒತ್ತಡ ತರಲು ಆರಂಭಿಸಿದ್ದಾರೆ, ಇದಕ್ಕೆ ಸಾಕ್ಷಿ ಎಂಬಂತೆ, ರೋಷನ್ ಬೇಗ್, ಡಾ.ಕೆ ಸುಧಾಕರ್, ಹಾಗೂ ಬಿಸಿ ಪಾಟೀಲ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ,
ಪಕ್ಷೇತರವಾಗಿ, ಅಥವಾ ಪಕ್ಷವೊಂದಕ್ಕೆ ಸೇರಿ ಉಪ ಚುನಾವಣೆಗೆ ಸ್ಪರ್ಧಿಸುವುದು ಸುಪ್ರೀಂಕೋರ್ಟ್ ನ ತೀರ್ಪು ಅವಲಂಬಿಸಿದೆ, ಅನರ್ಹ ಶಾಸಕರು ತಾವು ರಾಜಿನಾಮೆ ನೀಡಿದ್ದರ ಉದ್ದೇಶವನ್ನ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಬೇಕಾಗಿದೆ,ಅದಾದ ನಂತರ ಸುಪ್ರೀಂ ಅದನ್ನು ಮಾನ್ಯ ಮಾಡಿದರೆ ಬಿಜೆಪಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದೆ, ಸಂಪುಟ ವಿಸ್ತರಣೆಯಾದ ನಂತರ ಬಂಡಾಯಗಾರರು ಮತ್ತೆ ತಮ್ಮ ಸರ್ಕಾರಕ್ಕೆ ಬೆದರಿಕೆ ಒಡ್ಡುವ ಸಾಧ್ಯತೆಯಿದೆ ಎಂಬುದು ಯಡಿಯೂರಪ್ಪ ಅವರ ಆತಂಕವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos