ಬೆಂಗಳೂರು: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನ ನೀಡಿದ್ದ 370 ರ ವಿಧಿಗೆ ಮಾಜಿ ಪ್ರಧಾನಿ ಪಂ.ಜವಾಹರ್ ಲಾಲ್ ನೆಹರು ಸಂಪುಟದಲ್ಲಿದ್ದ ಭಾರತೀಯ ಜನಸಂಘ ರಾಜಕೀಯ ಪಕ್ಷದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಸಹ ಬೆಂಬಲ ನೀಡಿದ್ದರು ಎಂಬ ದಾಖಲೆಗಳು ತಮ್ಮ ಬಳಿಯಿವೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯಿಲಿ ಹೇಳಿದ್ದಾರೆ
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ 77ನೇ ಕ್ವಿಟ್ ಇಂಡಿಯಾ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಪ್ಪ ಮೊಯಿಲಿ, 370 ವಿಧಿ ರದ್ದುಗೊಳಿಸಿ ಕೇಂದ್ರ ಸರ್ಕಾರ ದೇಶದ ಜನರ ದಿಕ್ಕು ತಪ್ಪಿಸಿದೆ. ಮೋದಿ ಅವರನ್ನು ಅವತಾರಪುರುಷನಂತೆ ಬಿಂಬಿಸಲಾಗುತ್ತಿದೆ. ಕಾಶ್ಮೀರ ಈ ಹಿಂದೆಯೇ ಭಾರತಕ್ಕೆ ಸೇರಿದೆ. ಆದರೆ ಮೋದಿ ಅದನ್ನು ಈಗ ಸೇರಿಸಿರುವುದಾಗಿ ಬಿಂಬಿಸುತ್ತಿದ್ದಾರೆ. ಕಾಶ್ಮೀರ ಬಹಳ ವರ್ಷಗಳ ಹಿಂದಿನಿಂದಲೇ ದೇಶದ ಅವಿಭಾಜ್ಯ ಅಂಗವಾಗಿದೆ ಎನ್ನುವುದನ್ನು ಜನರಿಗೆ ತಿಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಜಮ್ಮುಕಾಶ್ಮೀರದ ಸಂವಿಧಾನವನ್ನು ಪ್ರಧಾನಿ ನರೇಂದ್ರ ಮೋದಿಯೂ ನೋಡಿರಲಿಲ್ಲ. ನಮ್ಮ ಕಾಂಗ್ರೆಸ್ ನಾಯಕರು ಆ ಬಗ್ಗೆ ತಿಳಿದುಕೊಳ್ಳಲಿಲ್ಲ. ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ. ಆದರೂ ಅದನ್ನ ಪ್ರತ್ಯೇಕವಾಗಿಯೇ ನೋಡಿದ್ದೇವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರ ಚಳವಳಿಯ ವೇಳೆ ಕಾಂಗ್ರೆಸ್ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದರೆ ಸಂಘ ಪರಿವಾರ ಬ್ರಿಟೀಷರ ಪ ವಹಿಸಿತ್ತು. ಮೂರು ರಾಜ್ಯಗಳಲ್ಲಿ ಅಂದು ಮುಸ್ಲಿಂ ಲೀಗ್ ಹಾಗೂ ಹಿಂದೂ ಮಹಾಸಭಾ ಸೇರಿ ಬ್ರಿಟೀಷರ ಪರವಾಗಿ ಮೈತ್ರಿ ಸರ್ಕಾರ ರಚನೆ ಮಾಡಿದ್ದವು.ಕ್ವಿಟ್ ಇಂಡಿಯಾ ಚಳವಳಿ "ಮಾಡು ಇಲ್ಲವೆ ಮಡಿ" ಹೋರಾಟವಾಗಬೇಕೆಂದು ಗಾಂಧಿ ಹೇಳಿದರು. ಅದರಂತೆ ಬ್ರಿಟೀಷರ ವಿರುದ್ಧ ಕಾಂಗ್ರೆಸಿಗರು ಹೋರಾಟ ನಡೆಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos