ರಾಜಕೀಯ

ಮೈತ್ರಿ ಸರ್ಕಾರ ಬಿದ್ದು ಹೋಯ್ತು, ಜೆಡಿಎಸ್ ನಲ್ಲಿ ಶುರುವಾಗಿದೆ ಶಾಸಕರ ಪಕ್ಷಾಂತರ ಭೀತಿ!

Sumana Upadhyaya

ಬೆಂಗಳೂರು: ಹಿಂದಿನ ಮೈತ್ರಿ ಸರ್ಕಾರದಲ್ಲಿ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಮತ ಕಳೆದುಕೊಂಡು ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಹಳೆಯ ಕಥೆ, ಮೈತ್ರಿಕೂಟದಲ್ಲಿದ್ದ ಹಲವು ಶಾಸಕರು ನೀಡಿದ್ದ ಬೆಂಬಲ ಹಿಂಪಡೆದು ಸರ್ಕಾರ ಬಿದ್ದುಹೋಯಿತು. ಆದರೆ ಭಿನ್ನಾಭಿಪ್ರಾಯ ಅಲ್ಲಿಗೇ ಶಮನವಾಗಿಲ್ಲ. 


ಜೆಡಿಎಸ್ ನಲ್ಲಿ ಅತೃಪ್ತಿ, ಭಿನ್ನಾಭಿಪ್ರಾಯ ಇನ್ನೂ ಹೊಗೆಯಾಡುತ್ತಲೇ ಇದೆ. 34 ಶಾಸಕರನ್ನು ಹೊಂದಿರುವ ಜೆಡಿಎಸ್ ನಲ್ಲಿ ಸುಮಾರು 12 ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.


ಹಿಂದಿನ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ರಾಜೀನಾಮೆ ನೀಡಿದ್ದರಿಂದ ಪಕ್ಷವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಹೆಚ್ ವಿಶ್ವನಾಥ್, ಗೋಪಾಲಯ್ಯ ಮತ್ತು ನಾರಾಯಣ ಗೌಡ ಅವರನ್ನು ಪಕ್ಷದಿಂದ ಜೆಡಿಎಸ್ ವರಿಷ್ಠ ದೇವೇಗೌಡರು ತೆಗೆದುಹಾಕಿದ್ದಾರೆ. ಇಷ್ಟಾದರೂ ಪಕ್ಷಕ್ಕೆ ಬಂದಿರುವ ಸಂಕಷ್ಟ ಪರಿಹಾರವಾದಂತೆ ಕಾಣುತ್ತಿಲ್ಲ. ಜೆಡಿಎಸ್ ನ ಇನ್ನೂ 12 ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. 


10 ವರ್ಷಗಳ ಹಿಂದೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿ ಕೈ ಸುಟ್ಟುಕೊಂಡಿದ್ದರಿಂದ ಮತ್ತೆ ಬಿಜೆಪಿ ಮತ್ತು ಜೆಡಿಎಸ್ ಒಂದಾಗುವ ಸಾಧ್ಯತೆಯಿಲ್ಲ. ಮುಖ್ಯಮಂತ್ರಿಯಾದ ನಂತರ ದ್ವೇಷ ರಾಜಕೀಯದಲ್ಲಿ ತೊಡಗುವುದಿಲ್ಲ ಎಂದು ಯಡಿಯೂರಪ್ಪನವರು ಹೇಳಿದರೂ ಕೂಡ ವಿಧಾನಸಭೆಯಲ್ಲಿ ತನ್ನ ಬಲದ 105 ಸದಸ್ಯ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿದರೆ ಅದನ್ನು ತಳ್ಳಿಹಾಕುವಂತೆಯೂ ಇಲ್ಲ. ಇದಕ್ಕಾಗಿ ಜೆಡಿಎಸ್ ನ್ನು ಮುರಿಯುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಿದರೆ ಅಥವಾ ತಮ್ಮ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿ ಎಂದು ಪರೋಕ್ಷವಾಗಿ ಬಿಜೆಪಿ ಬೆದರಿಕೆಯೊಡ್ಡಲಿಕ್ಕಿಲ್ಲ ಎಂದು ನಿರಾಕರಿಸಲು ಸಾಧ್ಯವಿಲ್ಲ.ಇಂತಹ ಸಂದರ್ಭ ಬಂದರೆ ಜೆಡಿಎಸ್ ವರಿಷ್ಠರು ಬಿಜೆಪಿಗೆ ಬೆಂಬಲ ನೀಡಲು ಮುಂದೆ ಬಂದರೆ ಆಶ್ಚರ್ಯವಿಲ್ಲ.


ಮೂವರು ಶಾಸಕರನ್ನು ಅನರ್ಹಗೊಳಿಸಿದ ಹುಣಸೂರು, ಮಹಾಲಕ್ಷ್ಮಿ ಲೇ ಔಟ್ ಮತ್ತು ಕೆ ಆರ್ ಪೇಟೆ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಗೆ ವಿಶೇಷ ಒತ್ತು ನೀಡಿ ಕೆಲಸ ಮಾಡಲಿದೆ ಜೆಡಿಎಸ್. ಸ್ಥಳೀಯ ನಾಯಕರ ವಲಸೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ತಳಮಟ್ಟದಲ್ಲಿ ಹೊಡೆತ ನೀಡಿದೆ. ಒಂದೆಡೆ ಈ ಮೂರು ಕ್ಷೇತ್ರಗಳಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಜೆಡಿಎಸ್ ಗೆ ಇದ್ದರೂ ಕೂಡ ಹೆಚ್ಚಿನ ಶಾಸಕರು ಪಕ್ಷ ಬಿಟ್ಟು ಹೋಗುವ ಭಯ ಕೂಡ ಇದೆ.

SCROLL FOR NEXT