ರಾಜಕೀಯ

ನರೇಂದ್ರ ಮೋದಿ ಹೃದಯವಿಲ್ಲದ ಪ್ರಧಾನಿ:ದಿನೇಶ್ ಗುಂಡೂರಾವ್ 

Sumana Upadhyaya

ಬೆಂಗಳೂರು:  ಬಿಜೆಪಿ ಕಾರ್ಯಸೂಚಿಗಳಿಗೆ ಸಮೀಪವಿರುವ ವಿಚಾರಗಳಿಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ಬಹಳ ಬೇಗ ಸ್ಪಂದಿಸಿ ಪ್ರತಿಕ್ರಿಯಿಸುತ್ತಾರೆಯೇ ಹೊರತು ಜನಸಾಮಾನ್ಯರ ವಿಚಾರಗಳ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.


ಬರೀ ಹಿಂದುತ್ವ ಅಜೆಂಡಾ ಹೊಂದಿರುವ ಮೋದಿ, ಹೃದಯವಿಲ್ಲದ ಪ್ರಧಾನಿ ಎಂದು ಟೀಕಿಸಿದ್ದಾರೆ.


ಕೆಪಿಸಿಸಿ ವತಿಯಿಂದ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75 ನೇ ಜನ್ಮದಿನಾಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ನೆರೆ ತಲೆದೋರಿದೆ. ಸಣ್ಣಪುಟ್ಟ ವಿಚಾರಗಳಿಗೂ ಟ್ವೀಟ್ ಮಾಡುವ ಮೋದಿ ಇನ್ನೂ ಏಕೆ ಕರ್ನಾಟಕದ ಪ್ರವಾಹದ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ. ಮೋದಿ ಅವರನ್ನು ಪ್ರಶ್ನಿಸುವವರೇ ಇಲ್ಲ. ಪಕ್ಷದವರಾಗಲೀ ಮಾಧ್ಯಮಗಳಾಗಲೀ ರಾಜ್ಯಕ್ಕೆ ಮೋದಿ ಏಕೆ ಇನ್ನೂ ಭೇಟಿ ಕೊಟ್ಟಿಲ್ಲ ಎಂದು ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 


ಪ್ರಸಕ್ತ ಆಡಳಿತದಲ್ಲಿರುವ ಸರ್ಕಾರ,ನೆಹರು ಕುಟುಂಬದ ತ್ಯಾಗ, ಬಲಿದಾನ, ದೇಶಕ್ಕೆ ನೀಡಿದ ಕೊಡುಗೆಗಳನ್ನು ತಿರುಚಿ ಹೇಳುತ್ತಿದೆ. ಈ ಅಪ ಪ್ರಚಾರಕ್ಕಾಗಿ ಸಾಮಾಜಿಕ ಜಾಲ ತಾಣವನ್ನು ದುರ್ಬಳಕೆ ‌ಮಾಡಿಕೊಳ್ಳಲಾಗುತ್ತಿದೆ. ಸುಳ್ಳುಗಳನ್ನೇ ಸತ್ಯವೆಂದು ಬಿಂಬಿಸುವ ಮೂಲಕ ದೇಶದಲ್ಲಿ ಭ್ರಮೆ ಸೃಷ್ಟಿಸಲಾಗುತ್ತಿದೆ ಎಂದರು.

SCROLL FOR NEXT