ಬೆಂಗಳೂರು: ರಾಮನಗರವನ್ನು ಕ್ಲೀನಿಂಗ್ ಮಾಡುವುದಾಗಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವಥ್ ನಾರಾಯಣ ಅವರಿಗೆ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಕ್ಲೀನಿಂಗ್ ಮಾಡುವುದು ಒಳ್ಳೆಯ ಕೆಲಸ. ಅವರು ಬಹಳ ಉತ್ಸಾಹದಿಂದಿದ್ದಾರೆ. ಅವರ ಉತ್ಸಾಹಕ್ಕೆ ನಾವು ಏಕೆ ಬೇಡ ಅನ್ನೋಣ, ಮಾಡಲಿ ಬಿಡಿ, ಐ ವಿಷ್ ಆಲ್ ದಿ ಬೆಸ್ಟ್ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಲೀನಿಂಗ್ ಕೆಲಸ ಮಾಡುವುದು ಒಳ್ಳೆಯದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಾವು, ಸಿಂಧ್ಯಾ ಎಲ್ಲರೂ ಈ ರಾಮನಗರ ಕ್ಷೇತ್ರದಿಂದಲೇ ಗೆದ್ದುಬಂದವರು. ನಮ್ಮಿಂದ ಆಗದೇ ಇರುವ ಕೆಲಸ ಉಪ ಮುಖ್ಯಮಂತ್ರಿ ಮಾಡಲಿ, ಅವರ ಉತ್ಸಾಹಕ್ಕೆ ನಾವು ತಣ್ಣೀರೆರಚುವುದಿಲ್ಲ ಎಂದು ಕುಟುಕಿದ್ದಾರೆ.
ಬಿಜೆಪಿ 13 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ 15 ಸ್ಥಾನಗಳನ್ನು ಗೆಲ್ಲುತ್ತದೆ, ಯಾಕೆ ಎರಡು ಸ್ಥಾನಗಳಲ್ಲಿ ಸೋಲ್ತಾರೆ.? ಅದು ಕೂಡ ಗೆಲ್ಲಲ್ಲಿ, ಪಾಪ ಎರಡು ಕ್ಷೇತ್ರಗಳಲ್ಲಿ ಸೋತು ಯಾಕೆ ಅವರಿಗೆ ಅನ್ಯಾಯ ಮಾಡ್ತಾರೆ.? ಈಗಾಗಲೇ ಇಬ್ಬರಿಗೆ ಅನ್ಯಾಯ ಮಾಡಿದ್ದಾರೆ, ಈಗ ಎರಡು ಕ್ಷೇತ್ರ ಸೋತು ಮತ್ಯಾಕೆ ಅನ್ಯಾಯ ಮಾಡುತ್ತಾರೆ.ಹದಿನೈದೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿ ಬಿಡಿ. 13 ಸ್ಥಾನ ಗೆಲ್ಲುತ್ತೇವೆ ಎನ್ನುವುದು ಯಡಿಯೂರಪ್ಪ ಅವರ ಭ್ರಮೆ ಎಂದು ತಿರುಗೇಟು ನೀಡಿದರು.