ರಾಜಕೀಯ

ಉಪಚುನಾವಣಾ ಫಲಿತಾಂಶ ಇಂದು- 13 ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು- ಬಿಎಸ್'ವೈ ವಿಶ್ವಾಸ 

Manjula VN

ಶಿವಮೊಗ್ಗ: ಬಹುನಿರೀಕ್ಷಿತ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದ್ದು, 13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಚುನಾವಣಾ ಫಲಿತಾಂಶದತ್ತ ರಾಜ್ಯದ ಗಮನ ಹರಿದಿದೆ. ಫಲಿತಾಂಶ ಕುರಿತು ನಾವು ಕಾತುರರಾಗಿದ್ದೇವೆ. ಬಹುಮತದಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆಂಬ ವಿಶ್ವಾಸ ನಮಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಗೆದ್ದರೂ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲಬಹುದು ಎಂದು ಹೇಳಿದ್ದಾರೆ. 

ಮುಂದಿನ ಮೂರುವರೆ ವರ್ಷಗಳವರೆಗೂ ಯಾವುದೇ ಅಡೆತಡೆಗಳಿಲ್ಲದೆ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ರಾಜ್ಯದಲ್ಲಿ ನಾವು ಸ್ಥಿರ ಸರ್ಕಾರವನ್ನು ನೀಡುತ್ತೇವೆ. ಜನಪರ ಆಡಳಿತ ನಮ್ಮದಾಗಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನವೇ ವಿರೋಧ ಪಕ್ಷಗಳ ಸಹಕಾರವನ್ನು ಕೋರುತ್ತಿದ್ದೇನೆ. ಅಭಿವೃದ್ಧಿ ಹಾದಿಗೆ ನಡೆಯುತ್ತಿರುವ ಸರ್ಕಾರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಪ್ರಗತಿಗೆ ಸಹಕಾರ ನೀಡಿ. ಈ ಬಾರಿಯ ಬಜೆಟ್ ವೇಳೆ ಈ ಸಮುದಾಯಗಳಿಗೆ ವಿಶೇಷ ಯೋಜನೆಗಳನ್ನು ಘೋಷಣೆ ಮಾಡುತ್ತೇವೆ. 

ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ರಾಜಧಾನಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ವಿರೋಧ ಪಕ್ಷಗಳ ಮತ್ತೊಂದು ಸುತ್ತಿನ ಆಪರೇಷನ್ ಕಮಲ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರ ಹೇಳಿಕೆಹಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಚುನಾವಣಾ ಫಲಿತಾಂಶದವರೆಗೂ ನಾನು ಕಾಯುತ್ತೇನೆಂದಿದ್ದಾರೆ. 

SCROLL FOR NEXT