ರಾಜಕೀಯ

ಶರತ್ ಬಚ್ಚೇಗೌಡ ನನ್ನ ಬಳಿ ಆಶೀರ್ವಾದ ಪಡೆಯಲು ಬಂದಿದ್ದರು, ನೀವು ಇಲ್ಲಸಲ್ಲದ ಕಥೆ ಕಟ್ತೀರಾ: ರಮೇಶ್ ಕುಮಾರ್ ಗರಂ 

Sumana Upadhyaya

ಕೋಲಾರ: ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರ ಮನೆಗೆ ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಶರತ್ ಬಚ್ಚೇಗೌಡ ಭೇಟಿ ನೀಡಿದ ವಿಚಾರದ ಬಗ್ಗೆ ಮಾಜಿ ಸ್ಪೀಕರ್ ಮಾಧ್ಯಮದ ವಿರುದ್ಧ ಗರಂ ಆಗಿದ್ದಾರೆ.


ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದ ಹಿನ್ನಲೆಯಲ್ಲಿ ಶರತ್ ಬಚ್ಚೇಗೌಡ ಹಿರಿಯವನಾದ ನನ್ನ ಬಳಿ ಆಶೀರ್ವಾದ ಪಡೆಯಲು ಬಂದಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಅದಕ್ಕೆ ಬೇರೆ ಕಥೆ ಕಟ್ಟಲಾಗುತ್ತಿದೆ. ಶರತ್ ಇವತ್ತು ಹೊಸದಾಗಿ ನಮ್ಮ ಮನೆಗೆ ಬಂದಿಲ್ಲ. ಬಹಳಷ್ಟು ಬಾರಿ ಬಂದಿದ್ದಾರೆ. ನಮ್ಮ ಮನೆಯಲ್ಲಿ ಕಷ್ಟ-ಸುಖ ಇದ್ದರೆ ಅವರು ಬರುತ್ತಾರೆ, ಅವರ ಮನೆಯಲ್ಲಿ ಸಣ್ಣ ತೊಂದರೆಯಾದರೂ ನಾನು ಓಡಿ ಹೋಗುತ್ತೇನೆ. ಅವರ ತಂದೆ ಬಚ್ಚೇಗೌಡ-ನಾನು ಅಣ್ಣ ತಮ್ಮಂದಿರಿದ್ದ ಹಾಗೆ, ನಾವು ತುಂಬಾ ಆತ್ಮೀಯ ಗೆಳೆಯರು ಎಂದರು.


ಚುನಾವಣೆಯಲ್ಲಿ ಗೆದ್ದು ಆಶೀರ್ವಾದ ಪಡೆಯಲು ಶರತ್ ಬಚ್ಚೇಗೌಡ ನನ್ನ ಬಳಿ ಬಂದಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದು ನಾನು ಹಾರೈಸಿದ್ದೇನೆ ಅಷ್ಟೆ, ಅದಕ್ಕೆ ಇಲ್ಲಸಲ್ಲದ ಕಥೆ ಕಟ್ಟುವುದು ಏಕೆ ಎಂದು ಮಾಧ್ಯಮದವರನ್ನು ರಮೇಶ್ ಕುಮಾರ್ ಪ್ರಶ್ನಿಸಿದರು.

SCROLL FOR NEXT