ರಾಜಕೀಯ

ಹಿರಿಯ ತಲೆಗಳಿಲ್ಲದೆ ಬಣಗುಡುತ್ತಿರುವ ಕಾಂಗ್ರೆಸ್: ಯಾರಿಗೆ ಮಣೆ ಹಾಕುತ್ತೆ 'ಕೈ' ಕಮಾಂಡ್? 

Manjula VN

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ನಾಯಕ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ನಾಯಕರಿಲ್ಲದೆ, ಕಾಂಗ್ರೆಸ್ ಬಣಗುಡುತ್ತಿದ್ದು, ಇದೀಗ ಉನ್ನತ ನಾಯಕರಿಗಾಗಿ ಕೈ ಪಕ್ಷ ತೀವ್ರ ಹುಡುಕಾಟದಲ್ಲಿ ತೊಡಗಿಕೊಂಡಿದೆ. 

ತಮ್ಮ  ಅಧಿಕೃತ ಕಾರಿನಲ್ಲಿ ಪ್ರತೀನಿತ್ಯ ಕೆಪಿಸಿಸಿ ಕಚೇರಿಗೆ ಬರುತ್ತಿದ್ದ ದಿನೇಶ್ ಗುಂಡೂ ರಾವ್ ಅವರು ಕಳೆದ ನಾಲ್ಕು ದಿನಗಳಿಂದ ಕಚೇರಿಗೆ ಹಾಜರಾಗಿಲ್ಲ. ಮುಂದಿನ ನಾಯಕರ ನೇಮಕಾತಿವರೆಗೂ ಅಧಿಕಾರದಲ್ಲಿ ಮುಂದುವರೆಯುವಂತೆಕೆಲ ನಾಯಕರು ಹಾಗೂ ಸಹೋದ್ಯೋಗಿಗಳು ಗುಂಡುರಾವ್ ಅವರ ಮನವೊಲಿಸಲು ಯತ್ನ ನಡೆಸುತ್ತಿದ್ದಾರೆ. ಆದರೆ, ಅದಕ್ಕೆ ಗುಂಡೂರಾವ್ ಅವರು ಒಪ್ಪುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಇನ್ನು ಮತ್ತೊಂದೆಡೆ ಎರಡೂ ಸ್ಥಾನಗಳಿಗೆ ಕಾಂಗ್ರೆಸ್ ಪಾಳಯದಲ್ಲಿ ಈಗಾಗಲೇ ಲಾಬಿ ಶುರುವಾಗಿದೆ. 

ಸಿದ್ದರಾಮಯ್ಯ ಹಾಗೂ ಗುಂಡೂರಾವ್ ಇಬ್ಬರೂ ಎಂದಿನಂತೆ ತಮ್ಮ ಹುದ್ದೆಗಳಲ್ಲಿ ಮುಂದುವರೆಯಬೇಕಿದೆ. ಏಕೆಂದರೆ, ಉಪಚುನಾವಣೆ ವೇಳೆ ತೆಗೆದುಕೊಂಡ ಎಲ್ಲಾ ನಿರ್ಧಾರಗಳೂ ಕೂಡ ಎಲ್ಲರ ಅಭಿಪ್ರಾಯವಾಗಿತ್ತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ನಿರ್ಧಾರ ತೆಗೆದುಕೊಂಡಿದ್ದರು. ಕೇವಲ ಏಕಾಂಗಿಯಾಗಿ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ ಎಂದು ಹಿರಿಯ ನಾಯಕ ಆರ್.ವಿ.ದೇಶಪಾಂಡೆಯವರು ಹೇಳಿದ್ದಾರೆ. 

ಇನ್ನು ಜಾರಿ ನಿರ್ದೇಶನಾಲಯದಿಂದ ಬಂಧನ ಮುಕ್ತಗೊಂಡಿರುವ ಡಿಕೆ.ಶಿವಕುಮಾರ್ ಅವರನ್ನು ಭವಿಷ್ಯದ ದೊಡ್ಡ ನಾಯಕರೆಂದು ಬಿಂಬಿಸಲಾಗುತ್ತಿದ್ದು, ಮುಂದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರತೊಡಗಿವೆ. 

ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷಗಳ ಕಾಲಾವಕಾಶವಿದೆ. ದಿವಂಗತ ವೀರೇಂದ್ರ ಪಾಟೀಲ್ ಅಥವಾ ಆಸ್ಕರ್ ಫರ್ನಾಂಡೀಸ್ರಂತಹ ನಾಯಕರು ನಮಗೆ ಅಗತ್ಯವಿದ್ದಾರೆಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. 

SCROLL FOR NEXT