ರಾಜಕೀಯ

ತ್ರಿಶಂಕು ಸ್ವರ್ಗ ಸ್ಥಿತಿಯಲ್ಲಿ ಮುನಿರತ್ನ: ಸದ್ಯಕ್ಕಿಲ್ಲ ಆರ್ ಆರ್ ನಗರ ಉಪಚುನಾವಣೆ

Shilpa D

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಭಾ ಕ್ಷೇತ್ರದಿಂದ ಮುನಿರತ್ನ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿರುವ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ 2020ರ ಫ್ರೆಬ್ರವರಿ ಮೊದಲ ವಾರಕ್ಕೆ ಮುಂದೂಡಿದೆ.

ಬಿಜೆಪಿಯ ಪರಾಜಿತ ಅಭ್ಯರ್ಥಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಿಚಾರಣೆ ಮುಂದೂಡಿತು.

ಮುನಿರತ್ನ ಪರ ಅಶೋಕ್‌ ಹಾರನಹಳ್ಳಿ, ‘‘ಚುನಾವಣಾ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಮುನಿರತ್ನ ಆಯ್ಕೆಯನ್ನು ಅಸಿಂಧುಗೊಳಿಸಿ ಅವರ ಬದಲು ತಮ್ಮನ್ನು ಆಯ್ಕೆ ಮಾಡಬೇಕೆಂದು ಅರ್ಜಿದಾರರು ಕೋರಿದ್ದಾರೆ. ಈ ಕೋರಿಕೆ ಈಗಾಗಲೇ ಈಡೇರಿರುವುದರಿಂದ ಅರ್ಜಿ ಇತ್ಯರ್ಥಗೊಳಿಸಬೇಕು, ಇಲ್ಲವಾದರೆ ಉಪಚುನಾವಣೆಗೆ ಅಡ್ಡಿಯಾಗಲಿದೆ’’ ಎಂದು ನ್ಯಾಯಾಲಯದ ಗಮನಸೆಳೆದರು. ನ್ಯಾಯಪೀಠ, ಲಿಖಿತ ವಾದ ಸಲ್ಲಿಸುವಂತೆ ಮುನಿರಾಜುಗೌಡ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

17 ಶಾಸಕರ ಜೊತೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಮುನಿರತ್ನರನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅನರ್ಹಗೊಳಿಸಿದ್ದರು. ಇದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಇದೀಗ ಶಾಸಕ ಸ್ಥಾನವನ್ನೂ ಕಳೆದುಕೊಂಡು, ಅತ್ತ ಉಪಚುನಾವಣೆಯೂ ನಡೆಯದ ಹಿನ್ನೆಲೆಯಲ್ಲಿ ಮುನಿರತ್ನ ಸ್ಥಿತಿ ತ್ರಿಶಂಕು ಸ್ವರ್ಗ ಎಂಬಂತಾಗಿದೆ.

SCROLL FOR NEXT