ರಾಜಕೀಯ

ಕಾಂಗ್ರೆಸ್ ನಾಯಕರಿಗೆ ತಲೆನೋವಾದ 'ಸತೀಶ್ ಜಾರಕಿಹೊಳಿ ನಮ್ಮ ಸಿಎಂ' ಅಭಿಯಾನ

Sumana Upadhyaya
ಬೆಳಗಾವಿ: ಸಿದ್ದರಾಮಯ್ಯ ನಮ್ಮ ನಿಜವಾದ ಮುಖ್ಯಮಂತ್ರಿ ಎಂದು ಕೆಲವು ಕಾಂಗ್ರೆಸ್ ಶಾಸಕರು ಇತ್ತೀಚೆಗೆ ಹೇಳಿಕ ನೀಡಿದ್ದು ಮೈತ್ರಿಕೂಟದಲ್ಲಿ ಅಪಸ್ವರ ಏಳಲು ಕಾರಣವಾಗಿತ್ತು. ಇದೀಗ ಅರಣ್ಯ ಖಾತೆ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ #MyCMSatishJarakiholi ಎಂಬ ಅಭಿಯಾನ ಆರಂಭಿಸಿದ್ದು ಪಕ್ಷದ ನಾಯಕರಲ್ಲಿ ಹೊಸ ತಲೆನೋವನ್ನುಂಟುಮಾಡಿದೆ.
ಈ ಅಭಿಯಾನಕ್ಕೆ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಬೆಂಬಲ ಸಿಕ್ಕಿದ್ದು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಹಲವರು ಸತೀಶ್ ಜಾರಕಿಹೊಳಿಯವರು ಉತ್ತರ ಕರ್ನಾಟಕದಿಂದ ಸಿಎಂ ಹುದ್ದೆಗೆ ಸೂಕ್ತ ಅಭ್ಯರ್ಥಿ ಎಂದು ಪ್ರತಿಕ್ರಿಯಿಸಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲು ಅರ್ಹರು ಎಂದು ಹೇಳಿರುವುದಕ್ಕೆ ಪ್ರತಿಯಾಗಿ ಸತೀಶ್ ಜಾರಕಿಹೊಳಿ ಸಿಎಂ ಅಭ್ಯರ್ಥಿಯಾಗಲು ಸೂಕ್ತ ಮುಖಂಡ ಎಂದು ಉತ್ತರ ಕರ್ನಾಟಕದವರು ಹೇಳುತ್ತಿದ್ದಾರೆ.
ತಮ್ಮ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬೆಂಬಲಿಗರು ಮಾಡುತ್ತಿರುವ ಪ್ರಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ನನಗೆ ಸಿಎಂ ಆಗಬೇಕೆಂಬ ಆಸೆ ಖಂಡಿತಾ ಇದೆ. ರಾಜಕೀಯದಲ್ಲಿ ಒಂದು ಹಂತಕ್ಕೆ ತಲುಪಿದಾಗ ಖಂಡಿತವಾಗಿಯೂ ಉನ್ನತ ಹುದ್ದೆ ವಹಿಸಬೇಕೆಂಬ ಆಸೆಯುಂಟಾಗುತ್ತದೆ. ನಾನು ಖಂಡಿತಾ ಸಿಎಂ ಆಕಾಂಕ್ಷಿಗಳ ಸ್ಥಾನದಲ್ಲಿದ್ದೇನೆ. ನನ್ನ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಅಭಿಯಾನ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆದುಕೊಳ್ಳಲಿದೆ ಎಂದು ನೋಡೋಣ ಎಂದರು.
ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ನಿಕಟವರ್ತಿಯಾಗಿದ್ದ ಸತೀಶ್ ಜಾರಕಿಹೊಳಿ ಇಂದು ಉತ್ತರ ಕರ್ನಾಟಕದಲ್ಲಿ ಅಪಾರ ಬೆಂಬಲಿಗರನ್ನು ಹೊಂದಿದ್ದಾರೆ.
SCROLL FOR NEXT