ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಭಾರೀ ತಲೆನೋವಾಗಿ ಪರಿಣಮಿಸಿರುವ ಕಾಂಗ್ರೆಸ್ ಅತೃಪ್ತ ಶಾಸಕರು ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೂಡಿದ ಬ್ರಹ್ಮಾಸ್ತ್ರಕ್ಕೆ ಬೆಚ್ಚಿಬಿದ್ದಿದ್ದಾರೆ.
ಇಂದು ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಮಂಡನೆಗೂ ಮುನ್ನ 9 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು. ಯಾರೇ ತಪ್ಪಿಸಿಕೊಂಡರೆ, ಅವರಯ ಸ್ವ-ಇಚ್ಛೆಯಿಂಂದ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಬಿಟ್ಟುಬಿಡಲು ಇಚ್ಛಿಸಿದ್ದಾರೆ ಎಂದು ಪರಿಣಗಣಿಸಿ, ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ದಂಡಸಂಹಿಯತೆ ಅನುಚ್ಛೇದ 10ರ (ಆ್ಯಂಟಿ ಡಿಫೆನ್ಸ್ ಲಾ) ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಅವರು ಪತ್ರಮುಖೇನ ಎಲ್ಲ ಶಾಸಕರಿಗೆ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಹೂಡಿರುವ ಈ ಆ್ಯಂಟಿ ಡಿಫೆನ್ಸ್ ಲಾ ಬ್ರಹ್ಮಾಸ್ತ್ರದಿಂದ ಕಕ್ಕಾಬಿಕ್ಕಿಯಾಗಿರುವ ಅತೃಪ್ತ ಶಾಸಕರು ಇಂದು ನಡೆಯುವ ಸಿಎಲ್ ಪಿ ಸಭೆಗೆ ಹಾಜರಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿದ್ದರಾಮಯ್ಯ ಅವರ ಮಾಸ್ಟರ್ ಪ್ಲಾನ್ನಿಂದಾಗಿ ಹಲವು ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಕಾಂಗ್ರೆಸ್ ಶಾಸಕರು ಮುಂಬೈ ಹೋಟೆಲ್ ನ 10 ಲಕ್ಷ ಬಿಲ್ ಕಟ್ಟಿ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಅಂತೆಯೇ ಸಿಎಲ್ಪಿ ಸಭೆಗೆ ಅತೃಪ್ತ ಶಾಸಕರು ಹಾಜರಾದರೆ ಅವರನ್ನು ಮನವೊಲಿಸಿ, ಪಕ್ಷ ಬಿಟ್ಟು ಹೋಗದಂತೆ ತಡೆಯಬಹುದು. ಇದು ವರ್ಕೌಟ್ ಆದರೆ, ಇಷ್ಟು ದಿನದವರೆಗೂ ಕೇಳಿಬರುತ್ತಿದ್ದ ಆಪರೇಷನ್ ಕಮಲ ಕೂಗು ಸದ್ದಡಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಅಭಿಮತವಾಗಿದೆ.