ನವದೆಹಲಿ: ನಿನ್ನೆ ಬಿಡುಗಡೆಯಾಗಿದ್ದ ಆಪರೇಷನ್ ಕಮಲದ ಆಡಿಯೋ ಟೇಪ್ ಬಿಡುಗಡೆ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಬಿರುಗಾಳಿ ಎಬ್ಬಿಸಿದೆ.
ಆಡಿಯೋ ಟೇಪ್ ಗೆ ಸಂಬಂಧಿಸಿದಂತೆ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಆಡಿಯೋ ಟೇಪ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಆಡಿರುವ ಮಾತುಗಳು ನಿಜಕ್ಕೂ ಆಘಾತಕಾರಿಯಾದದ್ದು. ಮಾಜಿ ಮುಖ್ಯಮಂತ್ರಿಯಾಗಿದ್ದುಕೊಂಡು ಅವರು ಇಂತಹ ನೀಚ ರಾಜಕೀಯಕ್ಕೆ ಇಳಿಯುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಸುರ್ಜೇವಾಲ ಕಿಡಿಕಾರಿದ್ದಾರೆ.
ಅಂತೆಯೇ ಆಡಿಯೋ ಟೇಪ್ ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನೂ ಬುಕ್ ಮಾಡುವ ಕುರಿತು ಮಾತುಗಳನ್ನಾಡಲಾಗಿದೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದೇಶದ ಉನ್ನತ ಸಂಸ್ಥೆಗಳನ್ನು ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನ. ನಿಜಕ್ಕೂ ಅಮಿತ್ ಶಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತಮ್ಮ ಪರ ತೀರ್ಪು ನೀಡುವಂತೆ ಬುಕ್ ಮಾಡಿಕೊಂಡಿದ್ದಾರೆಯೇ..? ಅದು ಹೇಗೆ ಅಮಿತ್ ಶಾ ಮತ್ತು ಮೋದಿ ತಮ್ಮ ನಾಯಕರಿಗೆ ಇಂತಹ ಆಶ್ವಾಸನೆ ನೀಡಲು ಸಾಧ್ಯ ಎಂದು ಸುರ್ಜೇವಾಲ ಟೀಕಿಸಿದ್ದಾರೆ.
ಅಲ್ಲದೆ ಸುಪ್ರೀಂ ಕೋರ್ಟ್ ಅನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತಮ್ಮ ಜೇಬಿನಲ್ಲಿಟ್ಟುಕೊಂಡಿದ್ದಾರೆಯೇ..ತಮಗೆ ಬೇಕು ಎಂದಾಗಲೆಲ್ಲಾ ಬಳಕೆ ಮಾಡಲು ಎಂದು ಟೀಕಿಸಿದರು.