ಚಿತ್ರದುರ್ಗ: ಉಪ್ಪಾರ ಸಮುದಾಯಕ್ಕೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದ್ದು, ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿ ಉಪ್ಪಾರ ಸಮುದಾಯದ ಬೃಹತ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಉಪ್ಪಾರ ಸಮುದಾಯಕ್ಕೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಲು ಸರ್ಕಾರಕ್ಕೆ ತಾವು ಶಿಫಾರಸು ಮಾಡುವುದಾಗಿ ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಿಎಂ ಕುಮಾರಸ್ವಾಮಿಯವರಿಗೆ ಮನವಿ ಮಾಡುವುದಾಗಿ ಹೇಳಿದರು.
ಸಮಾನತಾವಾದದ ಸಮಾಜ ಸೃಷ್ಟಿಯಲ್ಲಿ ತಮಗೆ ಬಲವಾಗಿ ನಂಬಿಕೆಯಿದ್ದು, ಉಪ್ಪಾರ ಸಮುದಾಯದವರು ಇನ್ನೂ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿದ್ದಾರೆ.ಅವರನ್ನು ಸಮಾಜದಲ್ಲಿ ಕೆಳದರ್ಜೆಯವರಾಗಿ ಪರಿಗಣಿಸಲಾಗುತ್ತಿದೆ. ಭಾರತೀಯ ಜನತಾ ಪಾರ್ಟಿ ಸಮಾಜದಲ್ಲಿ ಜನರನ್ನು ಮೇಲು-ಕೀಳು ಎಂದು ನೋಡುತ್ತದೆ. ಉಪ್ಪಾರ ಸಮುದಾಯದವರನ್ನು ಪರಿಶಿಷ್ಟ ವರ್ಗದ ಸಾಲಿನಲ್ಲಿ ಪರಿಗಣಿಸಬೇಕೆಂದು ಭಾವಿಸುತ್ತೇನೆ ಎಂದರು.
ಉಪ್ಪಾರ ಸಮುದಾಯದ ಏಕೈಕ ಸಚಿವ ಪುಟ್ಟರಂಗ ಶೆಟ್ಟಿಯವರಿಗೆ ಟಿಕೆಟ್ ನೀಡುವ ಕುರಿತು ಮಾತನಾಡಿದ ಸಿದ್ದರಾಮಯ್ಯ,ಎಲ್ಲಾ ಅಡೆತಡೆಗಳ ಹೊರತಾಗಿಯೂ ಪುಟ್ಟರಂಗ ಶೆಟ್ಟಿಯವರಿಗೆ ಟಿಕೆಟ್ ನೀಡಲಾಗಿತ್ತು. ಮೂರು ಬಾರಿ ಶಾಸಕರಾಗುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದರು.