ಮಂಡ್ಯ: ನಮ್ಮ ಯಜಮಾನರ ಊರು ಎಂದರೇ ಇದು ನಮ್ಮ ಊರು, ಅಂಬರೀಷ್ ಅವರಿಗೆ ಇಲ್ಲಿನ ಜನ ತೋರಿಸಿದ ಪ್ರೀತಿಗೆ ಋಣ ತೀರಿಸಲು ಅವಕಾಶ ಸಿಕ್ಕರೆ ಖಂಡಿತಾ ತೀರಿಸುವೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ಬಸವನ ಆಶೀರ್ವಾದ ಪಡೆದು, ಕಾಣಿಕೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರನ್ನು ನೀವು ನೋಡಿಕೊಂಡಿದ್ದೀರಿ, ಸಾಕಿದ್ದೀರಿ, ಬೆಳೆಸಿದ್ದೀರಿ. ಆ ಒಂದು ಪ್ರೀತಿಯ ಋಣ ನಮ್ಮಲ್ಲಂತೂ ಇದ್ದೇ ಇದೆ. ಆ ಋಣ ತೀರಿಸಲು ಅವಕಾಶ ಸಿಕ್ಕರೆ ಖಂಡಿತಾ ನಾನು ಅದನ್ನು ನೆರವೇರಿಸುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ರಾಜಕೀಯ ಜೀವನದ ಕುರಿತು ಮಂಡ್ಯ ಜನರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ, ಅಭಿಮಾನಿಗಳ ಪ್ರೀತಿ ವಿಶ್ವಾಸದ ಮಾತುಗಳೇ ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದೇನೆ. ಮಂಡ್ಯದ ಜನತೆ ಹಾಗೂ ಅಂಬರೀಶ್ ಅವರ ಅಭಿಮಾನಿಗಳ ಆಸೆ, ಅಪೇಕ್ಷೆಯನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.