ರಾಜಕೀಯ

ಲೋಕಸಭೆ ಚುನಾವಣೆಗೆ ತಯಾರಿ: ಕಾಂಗ್ರೆಸ್ ನಿಂದ 'ಜನ ಸಂಪರ್ಕ' ಕಾರ್ಯಕ್ರಮ

Sumana Upadhyaya

ಬೆಂಗಳೂರು: 2019ರ ಲೋಕಸಭೆ ಚುನಾವಣೆಗೆ ಸಿದ್ದವಾಗಲು ರಾಜ್ಯ ಕಾಂಗ್ರೆಸ್ ಘಟಕ ಜನಸಂಪರ್ಕ ಕಾರ್ಯಕ್ರಮವನ್ನು ಇದೇ 26ರಿಂದ ಫೆಬ್ರವರಿ 15ರವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿದೆ.

ಚುನಾವಣೆಗೆ ಪಕ್ಷ ನಡೆಸುತ್ತಿರುವ ತಯಾರಿ ಕುರಿತು ನಿನ್ನೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಕ್ಷದ ಮುಖಂಡರೊಂದಿಗೆ ಪರಾಮರ್ಶೆ ಸಭೆ ನಡೆಸಿದ್ದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ತಳಮಟ್ಟದಿಂದ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಇದರ ಭಾಗವಾಗಿ ಜನಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ರಾಜ್ಯದ ಮನೆಮನೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ. ಮೋದಿ ಸರ್ಕಾರದ ವೈಫಲ್ಯಗಳು ಮತ್ತು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಅಗತ್ಯವೇನಿದೆ ಎಂಬುದನ್ನು ಜನತೆಗೆ ಮನದಟ್ಟು ಮಾಡುವ ಪ್ರಯತ್ನ ಮಾಡಲಾಗುವುದು ಎಂದರು.

ಕಾಂಗ್ರೆಸ್ ನ್ನು ಬೂತ್ ಮಟ್ಟ, ವಾರ್ಡ್ ಮಟ್ಟ ಸಮಿತಿಗಳಲ್ಲಿ ಮತ್ತು ಜಿಲ್ಲಾ ಘಟಕಗಳಲ್ಲಿ ಕೂಡ ಬಲಪಡಿಸಿ ದೌರ್ಬಲ್ಯಗಳೇನಾದರೂ ಕಂಡುಬಂದರೆ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಲೋಕಸಭೆಯಲ್ಲಿ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಬಿಟ್ಟುಕೊಡಬೇಕು ಎಂಬ ಜೆಡಿಎಸ್ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅದನ್ನು ಸೀಟು ಹಂಚಿಕೆ ವೇಳೆ ಚರ್ಚಿಸಲಾಗುವುದು ಎಂದರು.

ಮೈತ್ರಿಕೂಟದ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕೆಲವೊಂದು ಸಣ್ಣಪುಟ್ಟ ತೊಂದರೆಗಳನ್ನು ಬಗೆಹರಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.

SCROLL FOR NEXT