ಕಲಬುರ್ಗಿ: ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಕಾಂಗ್ರೆಸ್ ನಲ್ಲೇ ಮುಂದುವರಿಯಬೇಕೆ ಅಥವಾ ಬೇಡವೆ ಎನ್ನುವ ಕುರಿತಂತೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. .ಜಾಧವ್ ತಮ್ಮ ತಂದೆಯ ಪುಣ್ಯತಿಥಿ ಕಾರ್ಯಕ್ರಮಕ್ಕೆ ಕಲಬುರ್ಗಿಯ ಕಳಗಿ ಗ್ರಾಮದ ಬಡಸೂರು ತಾಂಡಾಗೆ ಬುಧವಾರ ಸಂಜೆ ಆಗಮಿಸಿದ್ದರು.
ಈ ವೇಳೆ ಮಾಧ್ಯಮದೊಡನೆ ಮಾತನಾಡಿದ ಜಾಧವ್ "ನಾನು ಮೂಲ ಕಾಂಗ್ರೆಸ್ಸಿಗ, ಪಕ್ಷದ ಜಿಲ್ಲಾ ಘಟಕದ ಕೆಲವು ಹಿರಿಯ ಮುಖಂಡರು ನಾನು ಪಕ್ಷ ತೊರೆಯುತ್ತೇನೆನ್ನುವ ಬಗ್ಗೆ ವದಂತಿ ಹರಡುತ್ತಿದ್ದಾರೆ.ಪಕ್ಷದ ಹಿರಿಯ ನಾಯಕರ ಅಸಡ್ಡೆಯ ಬಳಿಕ ತಾವು ಕಾಂಗ್ರೆಸ್ ನಲ್ಲೇ ಮುಂದುವರಿಯುತ್ತೇವೆಯೆ, ಇಲ್ಲವೆ ಎಂಬ ಬಗ್ಗೆ ನಿರ್ಧರಿಸಿಲ್ಲ." ಎಂದರು.
ಕಲಬುರ್ಗಿಯ ಕೆಲವು ಕಾಂಗ್ರೆಸ್ ನಾಯಕರು ಇತ್ತೀಚೆಗೆ ತಮ್ಮ ಮನೆಯ ಮುಂದೆ ಪ್ರತಿಭಟನೆಗಿಳಿದಿದ್ದರು ಎಂದ ಜಾಧವ್ "ಅವರು ನನ್ನನ್ನು ನಾನು 50 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿಕೊಂಡಿದ್ದೇನೆ ಎಂಬರ್ಥವಿದ್ದ ಬ್ಯಾನರ್ ಪ್ರದರ್ಶಿಸಿದ್ದರು" ಎಂದರು.
"ಸಮ್ಮಿಶ್ರ ಸರಕಾರವು ಅಧಿಕಾರಕ್ಕೆ ಬಂದಂದಿನಿಂದಲೂ, ಚಿಂಚೋಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ನನ್ನ ಮಾತುಗಳಿಗೆ ಅಧಿಕಾರಿಗಳು ಸಹ ಸೊಪ್ಪು ಹಾಕುತ್ತಿಲ್ಲ.ಒಂದೊಮ್ಮೆ ನಾನು ಸಚಿವನಾಗಿದ್ದಲ್ಲಿ ಅದೇ ಅಧಿಕಾರಿಗಳು ಕೆಲಸಕ್ಕೆ ನನ್ನ ಬಳಿ ಆಗಮಿಸುತ್ತಿದ್ದರಲ್ಲವೆ? ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿಸಿಕೊಳ್ಳಲು ನಾನಿನ್ನೇನು ಮಾಡಬೇಕು?" ಅಧಿಕಾರಿಗಳ ಮೇಲಿನ ಅಸಮಾಧಾನವನ್ನು ಅವರು ಹೊರಹಾಕಿದ್ದಾರೆ.
ಈಗ ಕ್ಯಾಬಿನೆಟ್ ಸ್ಥಾನ ನಿಡಿದರೆ ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದಾಗ ಅವರು ಈ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು.