ರಾಜಕೀಯ

'ಕೈ' ಶಾಸಕರ ಜಗಳಕ್ಕೆ ತೇಪೆ: ಭೀಮಾ ನಾಯಕ್ ಕ್ಷೇತ್ರದಲ್ಲಿದ್ದ ಆನಂದ್ ಸಿಂಗ್ ಕಚೇರಿ ತೆರವು

Srinivasamurthy VN
ಬಳ್ಳಾರಿ: ಈಗಲ್ಟನ್ ರೆಸಾರ್ಟ್ ನಲ್ಲಿನ ಕೈ ಶಾಸಕರ ಗಲಾಟೆ ಪ್ರಕರಣಕ್ಕೆ ತೇಪೆ ಹಾಕಲು ಕಾಂಗ್ರೆಸ್ ಪಕ್ಷ ಮುಂದಾಗಿದ್ದು, ಇದರಲ್ಲಿ ಭಾಗಶಃ ಯಶಸ್ಸು ಕೂಡ ಸಾಧಿಸಿದೆ ಎನ್ನಲಾಗಿದೆ. ಪರಿಣಾಮ ಶಾಸಕ ಭೀಮಾನಾಯಕ್ ಕ್ಷೇತ್ರದಲ್ಲಿದ್ದ ಆನಂದ್ ಸಿಂಗ್ ಅವರ ಕಚೇರಿಯನ್ನು ತೆರವುಗೊಳಿಸಲಾಗಿದೆ.
ಬಳ್ಳಾರಿ ಕೈ ಶಾಸಕರ ಬಡಿದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ನಡೆಸಿದ ಸತತ ಸಂಧಾನ ಯತ್ನಗಳು ಕೊನೆಗೂ ಫಲ ನೀಡಿದಂತೆ ಕಂಡುಬಂದಿದ್ದು, ಅದರ ಮೊದಲ ಭಾಗವಾಗಿ ಭೀಮಾನಾಯಕ್ ಕ್ಷೇತ್ರವಾಗಿರುವ ಹಗರಿ ಬೊಮ್ಮನಹಳ್ಳಿಯಲ್ಲಿದ್ದ ಶಾಸಕ ಆನಂದ್ ಸಿಂಗ್ ಅವರ ಕಚೇರಿಯನ್ನು ತೆರವುಗೊಳಿಸಲಾಗಿದೆ.
ಮಾಧ್ಯಮವೊಂದರ ವರದಿಯನ್ವಯ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಿನ್ನೆ ತಮ್ಮ ಕಚೇರಿಯಲ್ಲಿ ನಡೆಸಿದ್ದ ಸಂಧಾನ ಸಭೆ ಯಶಸ್ವಿಯಾಗಿದ್ದು, ಶಾಸಕ ಆನಂದ್ ಸಿಂಗ್ ಆಪ್ತರು ಹಾಗೂ ಭೀಮಾನಾಯಕ್ ಜೊತೆ ಸಂಧಾನ ಮಾಡಿಸುವಲ್ಲಿ ಗುಂಡೂರಾವ್ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ ಕಳೆದೆರಡು ತಿಂಗಳ ಹಿಂದೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಪಟ್ಟಣದಲ್ಲಿ ತೆರೆದಿದ್ದ ಆನಂದ್ ಸಿಂಗ್ ಅಭಿಮಾನಿಗಳ ಕಚೇರಿಯನ್ನು ತೆರವುಗೊಳಿಸಲಾಗಿದೆ. ಕಚೇರಿ ಆರಂಭಿಸಿದಾಗ ಸ್ಥಳೀಯ ಶಾಸಕ ಭೀಮಾನಾಯ್ಕ್ ಹಾಗೂ ಅವರ ಬೆಂಬಲಿಗರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಕೆಪಿಸಿಸಿಗೂ ದೂರು ನೀಡಲಾಗಿತ್ತು‌. ಉದ್ಘಾಟನೆ ವೇಳೆ ಆನಂದ್ ಸಿಂಗ್ ಇಲ್ಲಿಯವರೆಗೆ ಹೊಸಪೇಟೆಯಲ್ಲಿ ಮಾತ್ರ ಅಭಿವೃದ್ದಿಗಾಗಿ ನಮ್ಮ ಟ್ರಸ್ಟ್ ಕಚೇರಿ ತೆರೆದಿತ್ತು‌. ಇದೀಗ ಹಗರಿಬೊಮ್ಮನಹಳ್ಳಿಯಲ್ಲಿಯೂ ತೆರೆಯಲಾಗಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು.
ಆದರೀಗ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ತೆರೆದಿದ್ದ ಕಚೇರಿಯನ್ನು ಆನಂದ್ ಸಿಂಗ್ ಅಭಿಮಾನಿಗಳೇ ತೆರವುಗೊಳಿಸಿದ್ದಾರೆ. ಅಲ್ಲಿದ್ದ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದ್ದು, ಬಾಡಿಗೆಗೆ ಪಡೆದಿದ್ದ ಕಚೇರಿಯನ್ನೂ ಮರಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಮೊದಲ‌ ಹಂತವಾಗಿ ಶಾಸಕರಾದ ಆನಂದ್ ಸಿಂಗ್ ಹಾಗೂ ಭೀಮಾನಾಯ್ಕ್ ಇಬ್ಬರೂ ತಾವು ಸೈಲೆಂಟಾಗಿರುವ ಸೂಚನೆಯನ್ನು ಬೆಂಬಲಿಗರಿಗೆ ನೀಡಿದ್ದಾರೆ. 
SCROLL FOR NEXT