ರಾಜಕೀಯ

ಸರ್ಕಾರ ಪತನಕ್ಕೆ 15 ಶಾಸಕರ ರಾಜೀನಾಮೆ ಅಗತ್ಯ, ಇದು ಅಸಾಧ್ಯ- ಎಂ.ಬಿ. ಪಾಟೀಲ್

Nagaraja AB
ಬೆಳಗಾವಿ:  ಶಾಸಕರಾದ ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ಸರ್ಕಾರನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಸರ್ಕಾರ ಪತನಗೊಳಿಸಲು 15 ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ. ಅದು ಅಸಾಧ್ಯ ಎಂದು ಗೃಹ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.
ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ತಮ್ಮ ರಾಜೀನಾಮೆಗೆ ಕಾರಣಗಳಲ್ಲೊಂದು ಎಂದು ಆನಂದ್ ಸಿಂಗ್ ಮಾಧ್ಯಮಗಳಿಗೆ ಹೇಳಿದ ನಂತರ ಮಾತನಾಡಿದ ಎಂ. ಬಿ. ಪಾಟೀಲ್, ಈ ವಿಚಾರದ ಬಗ್ಗೆ ಆನಂದ್ ಸಿಂಗ್ ನನ್ನನ್ನು ಭೇಟಿ ಮಾಡಿ ದೂರು ದಾಖಲಿಸಬಹುದಾಗಿತ್ತು ಎಂದರು. 
ಆದಾಗ್ಯೂ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ,ಜಿ. ಪರಮೇಶ್ವರ್ ಮತ್ತಿತರರು ಶಾಸಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಹಲವು ದಿನಗಳಿಂದ ಸರ್ಕಾರ ಆಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ, ಯಶಸ್ಸು ಸಿಗುತ್ತಿಲ್ಲ. ಆ ನಾಟಕದ ಭಾಗವಾಗಿ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದರು.
ಆನಂದ್ ಸಿಂಗ್ ರಾಜೀನಾಮೆಯನ್ನು ಕಾಂಗ್ರೆಸ್ ಬಂಡಾಯ ಶಾಸಕರ ಗುಂಪಿಗೆ ಸೇರಿಸಬಾರದು. ಅವರು ಬೇರೆ ವಿಚಾರದಿಂದ ರಾಜೀನಾಮೆ ನೀಡಿದ್ದಾರೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
SCROLL FOR NEXT