ಬೆಂಗಳೂರು: ಶಾಸಕರ ಬಲಾಬಲ ಅಧಿವೇಶನ ಪ್ರಾರಂಭವಾದಾಗ ಗೊತ್ತಾಗುತ್ತದೆ. ತಾಕತ್ತು ತೋರಿಸುವುದು ಸದನದ ಹೊರಗೆ ಅಲ್ಲ, ಸದನ ಒಳಗೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಹಿಂದೆ ಕುಮಾರಸ್ವಾಮಿ, ದೇವೇಗೌಡ ಅವರು ಸಿದ್ದರಾಮಯ್ಯ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದರು, ರಾಜಕೀಯದಲ್ಲಿ ಮರೆಯಾಗುವ ಹತಾಶೆಯಿಂದ ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಿಮ್ಮ ವಿಳಾಸ ಎಲ್ಲಿದೆ ಎಂದು ಜನ ತೋರಿಸಿದ್ದಾರೆ. ಯಡಿಯೂರಪ್ಪ ಶಕ್ತಿ ಏನು ಎಂಬುದು ರಾಜ್ಯಕ್ಕೆ ಗೊತ್ತಿದೆ, ಯಡಿಯೂರಪ್ಪ ಹೊರಟರೆ ಯಾವ ಬಿರುಗಾಳಿಯೂ ಅವರನ್ನು ತಡೆಯಲು ಸಾಧ್ಯವಿಲ್ಲ, ನಿಮ್ಮ ಶಾಸಕರಿಗೆ ನಿಮ್ಮ ಬಗ್ಗೆ ವಿಶ್ವಾಸವಿಲ್ಲ ಎಂದು ಕಿಡಿಕಾರಿದರು.
ರೋಷನ್ ಬೇಗ್, ರಾಮಲಿಂಗಾರೆಡ್ಡಿ ನಿಮ್ಮ ಬಗ್ಗೆ ಏನು ಮಾತಾಡಿದ್ದಾರೆ ಎಂಬುದು ಗೊತ್ತಿದೆ, ಅಧಿವೇಶನದಲ್ಲಿ ಬಲಪ್ರದರ್ಶನ ಮಾಡುತ್ತೇವೆ ಎಂದು ನಾವು ಎಲ್ಲೂ ಹೇಳಿಲ್ಲ, ಆದಷ್ಟು ಬೇಗ ಸರ್ಕಾರ ಪತನವಾಗಲಿ ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಹೀಗೆ ಮಾತನಾಡುತ್ತಿದ್ದಾರೆ, ಪಾಪ ಸಿದ್ದರಾಮಯ್ಯ ಅವರಿಗೆ ಕೆಲಸ ಇಲ್ಲ, ಬಿಜೆಪಿಯವರು ಸರ್ಕಾರ ಬೀಳಿಸಲಿ ಎಂದು ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ ಟಾಂಗ್ ನೀಡಿದ್ದಾರೆ.