ಬೆಂಗಳೂರು: ಜೆಡಿಎಸ್ ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರ ಜೊತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ತಮ್ಮ ರಾಜೀನಾಮೆಗೆ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಅವರನ್ನೇ ನೇರ ಹೊಣೆಗಾರರನ್ನಾಗಿಸಿರುವ ಅವರು, ಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತಿರುವುದಾಗಿ ಹೇಳಿದ್ದಾರೆ.
ದೇವೇಗೌಡರ ಕುಟುಂಬ ರಾಜಕಾರಣದ ಕಿರುಕುಳದ ಕಾರಣಕ್ಕಾಗಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಗಂಭೀರ ಆರೋಪ ಮಾಡಿರುವ ಅವರು, ದೇವೇಗೌಡರ ಪುತ್ರಿಯರಿಂದ ತಮಗೆ ನಿರಂತರ ಕಿರುಕುಳವಾಗುತ್ತಿದೆ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದರೆ, ತಮ್ಮನ್ನು ಚಪ್ಪಲಿ ಬಿಡುವ ಜಾಗದಲ್ಲಿ ನಿಲ್ಲಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಹಾಗೂ ಅವರ ಕುಟುಂಬ ರಾಜಕಾರಣದಿಂದ ತಾವು ಸಾಕಷ್ಟು ನೋವು ಅನುಭವಿಸಿದ್ದು, ತಮ್ಮಂತೆಯೇ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿವರೂ ನೋವನ್ನು ಅನುಭವಿಸುತ್ತಿದ್ದಾರೆ. ದೇವೇಗೌಡರ ಕುಟುಂಬದ ಕಿರುಕುಳ ತಡೆಯಲು ಪಕ್ಷದಲ್ಲಿ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಶಾಸಕರ ಜೊತೆ ಪಕ್ಷದ ಮತ್ತಷ್ಟು ಶಾಸಕರು ರಾಜೀನಾಮೆ ನೀಡುವುದು ಖಚಿತ ಎಂದು ಭವಿಷ್ಯ ನುಡಿದರು
ಇನ್ನು ಬಿಜೆಪಿ ಸೇರುವ ಕುರುತು ಅಂತಿಮ ತೀರ್ಮಾನ ಮಾಡಿಲ್ಲ ಎಂದ ನಾರಾಯಣಗೌಡನನ್ನ ರಾಜೀನಾಮೆ ಅಂಗೀಕಾರವಾದ ನಂತರ ಬೆಂಬಲಿಗರೊಡನೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದಾರೆ.
ಇನ್ನು ರಾತ್ರೋರಾತ್ರಿ ಮನೆ ಖಾಲಿ ಮಾಡಿದ್ದೇಕೆ ಎಂಬ ಪ್ರಶ್ನೆಗೆ ಸ್ಪಷ್ಟನೆ ಕೊಟ್ಟ ಶಾಸಕರು ನಾನು ಮನೆ ಖಾಲಿ ಮಾಡಿದ್ದೇನೆ, ಆದರೆ ರಾತ್ರೋರಾತ್ರಿ ಖಾಲಿ ಮಾಡಿಲ್ಲ. ಅಷ್ತಕ್ಕೂ ಸಚಿವ ತಮ್ಮಣ್ಣ ಅವರ ಬಳಿ ನನ್ನ ಸಂಕಟವನ್ನೆಲ್ಲಾ ಹೇಳಿಕೊಂಡಿದ್ದೇನೆ ಎಂದಿದ್ದಾರೆ.