ರಾಜಕೀಯ

ಸಮಯ ಮೀರಿದರು ಕೊನೆಗೂ ಸ್ಪೀಕರ್ ಕಚೇರಿಗೆ ತಲುಪಿದ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು!

Vishwanath S
ಬೆಂಗಳೂರು: ಸುಪ್ರೀಂ ಆದೇಶದಂತೆ 11 ಅತೃಪ್ತ ಶಾಸಕರು 6 ಗಂಟೆಯೊಳಗೆ ಸ್ಪೀಕರ್ ಕಚೇರಿ ತಲುಪಬೇಕಿತ್ತು. ಆದರೆ ಸಮಯ ಮೀರಿ 6:05ಕ್ಕೆ ಶಾಸಕರು ಓಡೋಡಿಕೊಂಡು ಬಂದು ಸ್ಫೀಕರ್ ಕಚೇರಿಯನ್ನು ತಲುಪಿದರು. 
ಮುಂಬೈ ವಿಮಾನ ನಿಲ್ದಾಣದಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ಅತೃಪ್ತ ಶಾಸಕರನ್ನು ಸಿಗ್ನಲ್ ಫ್ರೀ ಮೂಲಕ ರಾಜ್ಯದ ಪೊಲೀಸರು ವಿಧಾನಸೌಧಕ್ಕೆ ತಲುಪಿಸಿದ ಕೆಲಸ ಮಾಡಿದರು. ಇನ್ನು ಸುಪ್ರೀಂ ಕೋರ್ಟ್ 6 ಗಂಟೆಯೊಳಗೆ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ಹೋಗಬೇಕು ಎಂದು ಸೂಚಿಸಿತ್ತು. 
ಈ ಹಿನ್ನಲೆಯಲ್ಲಿ ವಿಧಾನಸೌಧ ಆವರಣ ಪ್ರವೇಶಿಸಿದ ಅತೃಪ್ತ ಶಾಸಕರ ಪೈಕಿ ಭೈರತಿ ಬಸವರಾಜು ಓಡೋಡಿಕೊಂಡು ಬಂದು ಸ್ಪೀಕರ್ ಕಚೇರಿಗೆ ತಲುಪಿದರು. ನಂತರ ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಬಿಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಹೆಚ್ ವಿಶ್ವನಾಥ್, ಮುನಿರತ್ನ, ಪ್ರತಾಪ್ ಗೌಡ ಪಾಟೀಲ್, ಕೆ, ಗೋಪಾಲಯ್ಯ, ನಾರಾಯಣ ಗೌಡ, ಮಹೇಶ್ ಕುಮಟಳ್ಳಿ ಕಚೇರಿಗೆ ತಲುಪಿದರು. 
ಸದ್ಯ ಅತೃಪ್ತ ಶಾಸಕರು ಹೊಸದಾಗಿ ರಾಜಿನಾಮೆ ಪತ್ರವನ್ನು ಸಲ್ಲಿಸಲು ಸ್ಪೀಕರ್ ರಮೇಶ್ ಕುಮಾರ್ ಅವಕಾಶ ನೀಡಿದ್ದಾರೆ. ರಮೇಶ್ ಕುಮಾರ್ ಅವರು ಸಂಜೆ 7 ಗಂಟೆಗೆ ಸುದ್ದಿಗೋಷ್ಠಿ ಕರೆದಿರುವುದು ಸದ್ಯ ಕುತೂಹಲ ಕೆರಳಿಸಿದೆ.
ಶಾಸಕರ ರಾಜೀನಾಮೆ ಪ್ರಕರಣ: ವಿಚಾರಣೆಯ ಸಮಗ್ರ ವಿಡಿಯೋ ಚಿತ್ರೀಕರಣ: ಹೊಸ ಸಂಪ್ರದಾಯಕ್ಕೆ ನಾಂದಿ
ರಾಜ್ಯದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಣಯಿಸುವ ಶಾಸಕರ ರಾಜೀನಾಮೆ ಪ್ರಕರಣದ ಬಗ್ಗೆ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸಂಪೂರ್ಣ ವಿಡಿಯೋ ಚಿತ್ರೀಕರಣಕ್ಕೆ ಸೂಚನೆ ನೀಡಿರುವುದು ಗಮನ ಸೆಳೆದಿದೆ. 

ಮತ್ತೊಂದೆಡೆ ಬಿಗಿ ಭದ್ರತೆ ವ್ಯವಸ್ಥೆ ಮಾಡುತ್ತಿದ್ದ ಪೊಲೀಸರು ವಿಧಾನಸೌಧದ ಆವರಣವನ್ನು ಸಂಪೂರ್ಣ ವಿಡಿಯೋ ಕಣ್ಗಾವಲಿಗೆ ಒಳಪಡಿಸಿದ್ದರು. ಪೊಲೀಸ್ ಪೇದೆಗಳು ಅಲ್ಲಲ್ಲಿ ಕ್ಯಾಮರಾ ಹಿಡಿದು ಒಳಗೆ ಬರುವವರು, ಹೊರ ಹೋಗುವವರನ್ನು ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣದ ಬಗ್ಗೆ ವಿಚಾರಣೆ ಮಾಡಿ ನಿರ್ಧಾರ ತಿಳಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ಸೂಚನೆಯನ್ವಯ ಸ್ಪೀಕರ್ ರಮೇಶ್ ಕುಮಾರ್ ಪಾರದರ್ಶಕತೆಗೆ ಆದ್ಯತೆ ನೀಡಿದ್ದರು. ಇದಕ್ಕಾಗಿ ಖಾಸಗಿ ವಿಡಿಯೋಗ್ರಾಫರ್ ಒಬ್ಬರನ್ನು ನೇಮಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಶಾಸಕರ ರಾಜೀನಾಮೆ ಪ್ರಕರಣದ ವಿಚಾರಣೆಯನ್ನು ವಿಡಿಯೋ ಚಿತ್ರೀಕರಣ ಮಾಡಿದ್ದು, ಇದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. 
SCROLL FOR NEXT